ರಾಮದುರ್ಗ ರಾಜ್ಯಭಾರಕ್ಕಾಗಿ ಹಣಾಹಣಿ

Spread the love

ಬೆಳಗಾವಿ: ರಾಮದುರ್ಗ ಕ್ಷೇತ್ರ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ‌ ಒಂದು.

ಸದ್ಯ ವಿಧಾನಸಭೆ ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಕ್ಷೇತ್ರದಲ್ಲಿ ಮತ್ತೆ ಪಾರುಪತ್ಯ ಮುಂದುವರಿಸಲು ಅಶೋಕ ಪಟ್ಟಣ ಕಸರತ್ತು ನಡೆಸಿದ್ದರೆ, ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿ ಚಿಕ್ಕರೇವಣ್ಣ ಸ್ಪರ್ಧೆಗೆ ಅಣಿಯಾಗಿದ್ದಾರೆ. ಇನ್ನು ಬಿಜೆಪಿ ಟಿಕೆಟ್​ ವಂಚಿತ ಮಹಾದೇವಪ್ಪ ಯಾದವಾಡ ನಡೆ ನಿಗೂಢವಾಗಿದೆ. ಸದ್ಯ ಕ್ಷೇತ್ರದಲ್ಲಿ ಅಶೋಕ ಪಟ್ಟಣ ವರ್ಸಸ್ ಚಿಕ್ಕರೇವಣ್ಣ ಎಂಬ ಸ್ಥಿತಿಯಿದ್ದು, ಹೇಗಾದರೂ ಮಾಡಿ ಕ್ಷೇತ್ರವನ್ನು ಮತ್ತೆ ಕಮಲದ ತೆಕ್ಕೆಗೆ ತೆಗೆದುಕೊಳ್ಳಲು ಕೇಸರಿ‌ ಕಲಿಗಳು ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ, ಇದಕ್ಕೆ ಹಾಲಿ ಶಾಸಕ‌ ಮಹಾದೇವಪ್ಪ ಯಾದವಾಡ ಅಡ್ಡಗಾಲು ಹಾಕಿದ್ದು, ಸ್ವತಂತ್ರವಾಗಿ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ.

ಬಿಜೆಪಿ ಘಟಾನುಘಟಿಗಳಿಗೆ ಚಿಕ್ಕರೇವಣ್ಣ ಟಕ್ಕರ್: ಬೆಂಗಳೂರು ಮೂಲದ ಚಿಕ್ಕರೇವಣ್ಣ ಸಚಿವ ಎಂಟಿಬಿ ನಾಗರಾಜ ಸಂಬಂಧಿಯಾಗಿದ್ದು, ಮೂರನಾಲ್ಕು ವರ್ಷಗಳ ಹಿಂದೆಯಷ್ಟೇ ರಾಮದುರ್ಗಕ್ಕೆ ಬಂದು ನೆಲೆಸಿದ್ದರು. ಕಾಂಗ್ರೆಸ್ ಪಕ್ಷದ ಪ್ರಬಲ ಆಕಾಂಕ್ಷಿಯಾಗಿದ್ದ ಚಿಕ್ಕರೇವಣ್ಣ ಕಾಂಗ್ರೆಸ್ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕೇವಲ 10 ದಿನಗಳ ಹಿಂದೆಯಷ್ಟೇ ಬಿಜೆಪಿ ಸೇರಿದ್ದರು. ಹಾಲಿ ಶಾಸಕ ಮಹಾದೇವಪ್ಪ ಯಾದವಾಡ ಹಿಡಿದು ಏಳು ಜನ ಆಕಾಂಕ್ಷಿಗಳನ್ನು ಬದಿಗೊತ್ತಿ ಚಿಕ್ಕರೇವಣ್ಣಗೆ ಬಿಜೆಪಿ ಹೈಕಮಾಂಡ್ ಮಣೆ ಹಾಕಿದ್ದು, ಇಡೀ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಮೂಲ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ. ಇನ್ನೂ ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಮಹಾದೇವಪ್ಪ ಯಾದವಾಡ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಬಿಜೆಪಿಗೆ ಉರುಳಾಗುವ ಸಾಧ್ಯತೆ ಹೆಚ್ಚು ಎನ್ನುತ್ತಿದ್ದಾರೆ ಇಲ್ಲಿನ ರಾಜಕೀಯ ಚಿಂತಕರು.

ಕ್ಷೇತ್ರದ ಹಿನ್ನೆಲೆ: ರಾಮದುರ್ಗ ಕ್ಷೇತ್ರದಲ್ಲಿ 1951ರಿಂದ ಈವರೆಗೆ ನಡೆದ ಒಟ್ಟು 15 ಚುನಾವಣೆಗಳಲ್ಲಿ 10 ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ತಲಾ ಎರಡು ಬಾರಿ ಜನತಾ ಪಕ್ಷ, ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದಾರೆ. ಒಂದು ಬಾರಿ‌ ಲೋಕಸೇವಾ ಸಂಘ ವಿಜಯಶಾಲಿ ಆಗಿದೆ.

 ರಾಮದುರ್ಗ ಕ್ಷೇತ್ರದ ವಿವರಮತದಾರರ ವಿವರ: 1,02,690 ಪುರುಷ ಮತದಾರರಿದ್ದು, 99,202 ಮಹಿಳಾ‌ ಮತದಾರರು, 9 ಇತರೆ ಮತದಾರರು ಸೇರಿ ಒಟ್ಟು 2,01,901 ಮತದಾರರಿದ್ದಾರೆ. ಅತೀ ಹೆಚ್ಚು ಲಿಂಗಾಯತ ಮತದಾರರಿದ್ದು, ನಂತರದಲ್ಲಿ ಕುರುಬರು, ಲಂಬಾಣಿ, ಎಸ್ಸಿ-ಎಸ್ಟಿ, ಮುಸ್ಲಿಂದ ಮತದಾರರು ಸೇರಿ ಇನ್ನುಳಿದ ಸಮಾಜಗಳ ಮತದಾರರಿದ್ದಾರೆ.

ಕ್ಷೇತ್ರದ ವಿಶೇಷತೆ: ಶ್ರೀರಾಮಚಂದ್ರ ಶಬರಿಯನ್ನು ಭೇಟಿಯಾದ ಐತಿಹಾಸಿಕ‌ ಸ್ಥಳ ಇಲ್ಲಿದ್ದು, ಶಬರಿ ದೇವಸ್ಥಾನ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಉತ್ತರಕರ್ನಾಟಕದ ಜಾಗೃತ ಸ್ಥಳ ಗೊಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ತೋರಗಲ್ಲ ಏಳು ಸುತ್ತಿನ ಕೋಟೆ, ಎತ್ತರದ ಶಿವನ ಮೂರ್ತಿ ಇರುವುದು ಕೂಡ ರಾಮದುರ್ಗ ಕ್ಷೇತ್ರದಲ್ಲಿ. ಪೇಶ್ವೆಯ ಮಹಾರಾಜರು, ಭಾವೆ ರಾಜ ಮನೆತನ, ತೋರಗಲ್ಲ ಶಿಂಧೆ ಮನೆತನ ರಾಮದುರ್ಗ ತಾಲೂಕಿನಲ್ಲಿ ಆಡಳಿತ ನಡೆಸಿವೆ. 1939ರಲ್ಲಿ ರಾಮದುರ್ಗದಲ್ಲಿ ಅತೀ ಹೆಚ್ಚು ಕರ ತುಂಬುವಂತೆ ಆದೇಶ ಹೊರಡಿಸಿದ ಹಿನ್ನೆಲೆ ಕರನಿರಾಕರಣೆ ಚಳುವಳಿ ಮಾಡಿದ ಪ್ರಜೆಗಳು ಭಾವೆ ಮಹಾರಾಜನನ್ನು ರಾಮದುರ್ಗದಿಂದ ಓಡಿಸಿದ್ದು ಇತಿಹಾಸ.

 ರಾಮದುರ್ಗ ಕ್ಷೇತ್ರಬಲಿಷ್ಠ ಕಾಂಗ್ರೆಸ್ ವಿರುದ್ಧ ಲೋಕಸೇವಾ ಸಂಘಕ್ಕೆ ಗೆಲುವು: 1957ರಲ್ಲಿ ಬಲಾಢ್ಯ ಕಾಂಗ್ರೆಸ್ ಪಕ್ಷದ ವಿರುದ್ಧ ಲೋಕಸೇವಾ ಸಂಘದ ಅಭ್ಯರ್ಥಿಯಾಗಿ ಕಣಕ್ಕಿಳಿದ್ದ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಪಟ್ಟಣ ಕಾಂಗ್ರೆಸ್ ಅಭ್ಯರ್ಥಿ ವೆಂಕರಡ್ಡಿ ಶಿದ್ದರಡ್ಡಿ ತಿಮ್ಮರಡ್ಡಿ ವಿರುದ್ಧ 5067 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇದಾದ ಬಳಿಕ ರಾಮದುರ್ಗ ಕ್ಷೇತ್ರ ಮತ್ತೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. 1967ರಲ್ಲಿ ಮಹಾದೇವಪ್ಪ ಪಟ್ಟಣ ಅವರ ಪತ್ನಿ ಶಾರದಮ್ಮ ಪಟ್ಟಣ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದರು.

 ಅಶೋಕ ಮಹಾದೇವಪ್ಪ ಪಟ್ಟಣಹಿಂದಿನ ನಾಲ್ಕು ಚುನಾವಣೆಗಳ ಫಲಿತಾಂಶ: 2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ವಿರುದ್ಧ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಮಹಾದೇವಪ್ಪ ಯಾದವಾಡ 25,541 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2008 ಮತ್ತು 2013ರಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯ ಮಹಾದೇವಪ್ಪ ಯಾದವಾಡ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಪಟ್ಟಣ ಸತತ ಎರಡು ಬಾರಿ ಗೆದ್ದು ಬೀಗಿದ್ದರು. 2018ರಲ್ಲಿ ಅಶೋಕ ಪಟ್ಟಣ ಮಣಿಸಿ ಮಹಾದೇವಪ್ಪ ಯಾದವಾಡ ವಿಜಯಶಾಲಿಯಾಗಿದ್ದರು. ಇಬ್ಬರು ಕೂಡ ತಲಾ ಎರಡು ಬಾರಿ ಗೆಲುವು ಕಂಡಿದ್ದಾರೆ. ಅಶೋಕ ಮಹಾದೇವಪ್ಪ ಪಟ್ಟಣ ಇದೀಗ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

 ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡಈವರೆಗೆ ಆಯ್ಕೆಯಾದ ಶಾಸಕರು: ಪಕ್ಷ ಬೇರೆ ಬೇರೆಯಾಗಿದ್ದರೂ ಕ್ಷೇತ್ರದಲ್ಲಿಪಟ್ಟಣ ಕುಟುಂಬ ಪ್ರಾಬಲ್ಯ ಸಾಧಿಸಿದ್ದು ವಿಷೇಶ. ಕಾಂಗ್ರೆಸ್​ನಿಂದ ಅಶೋಕ ಮಹಾದೇವಪ್ಪ ಪಟ್ಟಣ ಎರಡು ಬಾರಿ ಕ್ಷೇತ್ರದ ಶಾಸಕರಾದರೆ ಬಿಜೆಯಿಂದ ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ ಕೂಡ ಎರಡು ಬಾರಿ ಪ್ರಾಬಲ್ಯ ಮೆರೆದಿದ್ದಾರೆ.

 ಚಿಕ್ಕರೇವಣ್ಣ1951 – ಹಣಮಂತ ಯಲ್ಲಪ್ಪ ಮುಂಬರೆಡ್ಡಿ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1957 – ಮಹಾದೇವಪ್ಪ ಶಿವಬಸಪ್ಪ ಪಟ್ಟಣ – ಲೋಕಸೇವಾ ಸಂಘ
1962 – ಆರ್. ಎಸ್. ಪಾಟೀಲ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1967 – ಶಾರದಮ್ಮ ಮಹಾದೇವಪ್ಪ ಪಟ್ಟಣ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1972 – ಆರ್. ಎಸ್. ಪಾಟೀಲ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1978 – ಆರ್.ಎಸ್. ಪಾಟೀಲ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1983 – ಫಕೀರಪ್ಪ ಅಲ್ಲಪ್ಪ ಕೊಪ್ಪದ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1885 – ಬಸವಂತಪ್ಪ ಬಸಪ್ಪ ಹಿರೇರಡ್ಡಿ – ಜನತಾ ಪಕ್ಷ
1989 – ಆರ್‌.ಟಿ. ಪಾಟೀಲ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
1994 – ಬಸವಂತಪ್ಪ ಬಸಪ್ಪ ಹಿರೇರಡ್ಡಿ – ಜನತಾ ಪಕ್ಷ
1999 – ಎನ್. ವ್ಹಿ. ಪಾಟೀಲ – ಇಂಡಿಯನ್ ನ್ಯಾಶನಲ್ ಕಾಂಗ್ರೆಸ್
2004 – ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ – ಬಿಜೆಪಿ
2008 – ಅಶೋಕ ಮಹಾದೇವಪ್ಪ ಪಟ್ಟಣ – ಕಾಂಗ್ರೆಸ್
2013 – ಅಶೋಕ ಮಹಾದೇವಪ್ಪ ಪಟ್ಟಣ – ಕಾಂಗ್ರೆಸ್
2018 – ಮಹಾದೇವಪ್ಪ ಶಿವಲಿಂಗಪ್ಪ ಯಾದವಾಡ – ಬಿಜೆಪಿ


Spread the love

About Laxminews 24x7

Check Also

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

Spread the love ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ