ಆನೇಕಲ್: ಆಕೆ ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಇನ್ನೊಬ್ಬನ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸಂಬಂಧ ಅದೆಷ್ಟೇ ಗಟ್ಟಿಯಾಗಿದ್ರೂ ಅನೈತಿಕವಾಗಿದ್ರೆ, ಅಂತ್ಯವಾಗೋದು ದುರಂತದಲ್ಲೇ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಆನೇಕಲ್ ತಾಲೂಕಿನ ಹೆಬ್ಬಗೋಡಿ ವ್ಯಾಪ್ತಿಯ ಸಿಂಗೇನ ಅಗ್ರಹಾರ ನಿರ್ಜನ ಪ್ರದೇಶದಲ್ಲಿ ಮಹಿಳೆಯ ಸುಟ್ಟ ದೇಹವೊಂದು ಕೆಲ ದಿನಗಳ ಹಿಂದೆ ಪತ್ತೆಯಾಗಿತ್ತು. ಮಹಿಳೆಯೊಬ್ಬಳ ಹುಡುಕಾಟದಲ್ಲಿದ್ದ ಹೆಬ್ಬಗೋಡಿ ಪೊಲೀಸರು ಈ ದೇಹ ಅವಳದ್ದೇನಾ ಅಂತ ಅವಳ ಸಂಬಂಧಿಕರಿಗೆ ಕರೆದುಕೊಂಡು ಬಂದಾಗ ಪೊಲೀಸರಿಗೆ ಇದ್ದ ಶಂಕೆ ನಿಜವಾಯಿತು. ಸಿಂಗೇನ ಅಗ್ರಹಾರದ ನಿರ್ಜನ ಪ್ರದೇಶದಲ್ಲಿ ಸುಟ್ಟಿರುವ ಸ್ಥಿತಿಯಲ್ಲಿ ಬಿದ್ದಿದ್ದ ದೇಹದ ತುಂಡುಗಳು, ತಲೆ ಬುರಡೆ ಹಾಗೂ ಅಸ್ಥಿ ಪಂಜಿರವು ನಡೆದಿದ್ದ ಘೋರ ಕತೆಯನ್ನು ಹೇಳುತ್ತಿತ್ತು.
ಕೆಲ ದಿನಗಳ ಹಿಂದೆ ಅಂದರೆ, ಮಾ. 29ರಂದು 32 ವರ್ಷದ ಮಂಜುಳ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ನಿರ್ಜನ ಪ್ರದೇಶದಲ್ಲಿ ಸಿಕ್ಕಿರುವ ದೇಹ ಗುರುತಿಸುವುದಕ್ಕೆ ಮಂಜುಳ ತಂಗಿ ಲಕ್ಷ್ಮಿಯನ್ನು ಪೊಲೀಸರು ಕರೆದು ತಂದಾಗ, ಕಿವಿ ಓಲೆ, ಚಪ್ಪಲಿ, ಕೊರಳಲ್ಲಿದ್ದ ಚೈನ್ ನೋಡಿ, ಹೌದು ಇದು ಮಂಜುಳದ್ದೇ ಮೃತದೇಹ ಎಂದು ತಂಗಿ ಹೇಳಿದ್ದಳು. 29ರಂದು ನಾರಾಯಣ ಜತೆ ಹೋಗಿದ್ದ ಅಕ್ಕ ಮತ್ತೆ ವಾಪಾಸ್ ಬಂದಿರಲಿಲ್ಲ. ಹಾಗಾಗಿ ನಾರಾಯಣ ಮೇಲೆ ಅನುಮಾನ ಇದೆ ಎಂದು ತಂಗಿ ಪೊಲೀಸರಿಗೆ ದೂರು ನೀಡಿದ್ದರು.
ಸಂಪಿಗೆನಗರ ನಿವಾಸಿ ನಾರಾಯಣಪ್ಪ ಹಾಗೂ ಮಂಜುಳ ನಡುವೆ ಹತ್ತು ವರ್ಷಗಳ ಹಿಂದೆ ಸ್ನೇಹ ಬೆಳೆದಿತ್ತು. ಮದುವೆ ಆದರೂ ಗಂಡನನ್ನು ಬಿಟ್ಟಿದ್ದ ಮಂಜುಳ ಎಲ್ಲರ ಮುಂದೆಯೇ ನಾರಾಯಣಪ್ಪನ ಜತೆ ಸಲುಗೆ ಬೆಳಸಿದ್ದಳು. ಹಲವು ಬಾರಿ ಇವರಿಬ್ಬರ ಮಧ್ಯೆ ಕಿರಿಕ್ ಆದಾಗ ಠಾಣೆಯಲ್ಲಿ ಅವಳನ್ನು ಮದುವೆ ಆಗಿದ್ದೇನೆ ಅಂತಲೂ ನಾರಾಯಣಪ್ಪ ಹೇಳಿದ್ದನಂತೆ. ಕೆಲ ದಿನಗಳ ಹಿಂದೆ ದುಡ್ಡು ಕೊಡು ಅಂತ ಕಿರಿಕ್ ತೆಗೆದಿದ್ದ ನಾರಾಯಣ ಮಂಜುಳಗೆ ಕೊಲೆ ಬೆದರಿಕೆ ಹಾಕಿದ್ದ. ಅಲ್ಲದೇ ನಿನ್ನನ್ನು ಸುಟ್ಟು ಹಾಕುತ್ತೇನೆ ಅಂತ ಸಂಬಂಧಿಕರ ಮಧ್ಯೆಯೇ ಹೇಳಿದ್ದನಂತೆ. 29ರಂದು ಬೆಳಗ್ಗೆ ಆಯಕ್ಟೀವಾದಲ್ಲಿ ಮಂಜುಳಾ
ಕರೆದುಕೊಂಡು ಹೋಗುವ ನಾರಯಣ, ಕೆಲ ಗಂಟೆಗಳ ಬಳಿಕ ತಾನೊಬ್ಬನೇ ಬರುತ್ತಾನೆ.
ಸದ್ಯಕ್ಕೆ ಪ್ರಕರಣ ದಾಖಲು ಮಾಡಿಕೊಂಡಿರುವ ಹೆಬ್ಬಗೋಡಿ ಪೊಲೀಸರು ಹಲವು ಆಯಾಮದಲ್ಲಿ ಪ್ರಕರಣದ ತನಿಖೆ ಮುಂದುವರೆಸಿದ್ದು, ನಾರಾಯಣನ ಬಂಧನದ ಬಳಿಕ ಇನ್ನಷ್ಟು ಮಾಹಿತಿ ಹೊರಬರಲಿದೆ.