ಬೆಳಗಾವಿ ತಾಲೂಕಿನ ಪೀರನವಾಡಿಯಲ್ಲಿ 25 ವರ್ಷಗಳ ಹಿಂದೆ ಮಾರಾಟ ಮಾಡಿದ ನಿವೇಶನಗಳನ್ನು ಮರಳಿ ವಶಕ್ಕೆ ಪಡೆಯುವ ಗೂಂಡಾ ವರ್ತನೆಯನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಪೀರನವಾಡಿಯ 265ಕ್ಕೂ ಹೆಚ್ಚು ನಿವೇಶನಗಳ ಅಸಲಿ ಮಾಲೀಕರು ಮತ್ತು ಕುಟುಂಬದವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ಪೀರನವಾಡಿಯ 265ಕ್ಕೂ ಹೆಚ್ಚು ನಿವೇಶನಗಳ ಅಸಲಿ ಮಾಲೀಕರು ಮತ್ತು ಕುಟುಂಬದವರು ತಮಗೆ ನ್ಯಾಯ ಕೊಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಗೂಂಡಾಗಿರಿ ವರ್ತನೆ ತೋರುತ್ತಿರುವವವ ವಿರುದ್ಧ ಘೋಷಣೆ ಕೂಗಿ, ನ್ಯಾಯ ಬೇಕೆಂದು ಘೋಷಣೆ ಮೊಳಗಿಸಿದರು.
ಈ ವೇಳೆ ಪೀರನವಾಡಿ ವಿನಾಯಕ ನಗರದಲ್ಲಿ 25 ವರ್ಷಗಳ ಹಿಂದೆ ಕಾನೂನುಬದ್ಧವಾಗಿ ನಿವೇಶನ ಖರೀದಿಸಿ ಮನೆ ಕಟ್ಟಿಕೊಂಡಿರುವ ಶೋಭಾ ಮಣಗುತ್ತಿ ಮಾತನಾಡಿ, ಪೀರನವಾಡಿಯಲ್ಲಿ 25 ವರ್ಷಗಳ ಹಿಂದೆ ಮಾರಾಟ ಮಾಡಿದ ನಿವೇಶನಗಳನ್ನು ಮರಳಿ ವಶಕ್ಕೆ ಪಡೆಯಲು ಕೆಲವರು ಗೂಂಡಾ ವರ್ತನೆ ತೋರುತ್ತಿದ್ದಾರೆ. ಪಂಚಾಯಿತಿಯಲ್ಲಿ ನಮ್ಮ ಹೆಸರು ನೋಂದಾಯಿಸಲಾಗಿದ್ದು, ಸಾತ್ ಬಾರ್ ಉತಾರದಲ್ಲಿ ಹೆಸರು ಬದಲಾಗಿಲ್ಲ ಎಂಬುದನ್ನೇ ಆಧಾರವಾಗಿಟ್ಟುಕೊಂಡು ಗಲಾಟೆ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯವರೆಂದು ಹೇಳಿಕೊಂಡು ಅಟ್ರಾಸಿಟಿ ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದಾರೆ.
ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು. ಕಾನೂನುಬದ್ಧವಾಗಿ ಖರೀದಿಸಿದ ನಮ್ಮ ನಿವೇಶನ, ಮನೆಗಳನ್ನು ಉಳಿಸಬೇಕು. ಉಪವಿಭಾಗಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ವೇಳೆ ಪೀರನವಾಡಿ ವಿನಾಯಕ ನಗರದಲ್ಲಿ ನಿವೇಶನ ಹೊಂದಿರುವ ಜಯಶ್ರೀ ಮಿರ್ಜಿ ಮಾತನಾಡಿ, 25 ವರ್ಷಗಳ ಹಿಂದೆ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಕಾನೂನುಬದ್ಧವಾಗಿ ನಾವು ಜಾಗೆ ಖರೀದಿ ಮಾಡಿ ಮನೆ ಕಟ್ಟಿಕೊಂಡಿದ್ದೇವೆ. ನಮ್ಮ ಭಾಗದ ಶಾಸಕ ಅಭಯ ಪಾಟೀಲ ಇಲ್ಲಿಯ ನಾಗರಿಕರಿಗೆ ಅನುಕೂಲವಾಗಲೆಂದು ರಸ್ತೆ, ಗಟಾರ್ ನಿರ್ಮಿಸಿ ಉಪಕರಿಸಿದ್ದಾರೆ. ಪಂಚಾಯಿತಿ ದಾಖಲೆಗಳಲ್ಲಿ ನಮ್ಮದೇ ಹೆಸರಿದೆ. ಆದರೆ ಹಲವರು ಕುಡಿದು ಬಂದು ಗಲಾಟೆ ಮಾಡುತ್ತಿದ್ದಾರೆ. ನಾವು ಜೀವ ಬಿಡುವುದೇ ನಿಜವಾಗಿದ್ದರೆ ಇಲ್ಲಿಯೇ ಜೀವ ಬಿಡುತ್ತೇವೆ ಎಂದರು.
ಒಟ್ಟಿನಲ್ಲಿ ಪರಿಶಿಷ್ಟ ಜಾತಿಯವರೆನ್ನುವ ಕಾರಣ ಮುಂದೊಡ್ಡಿ ಜನರಿಗೆ ತೊಂದರೆ ನೀಡುತ್ತಿರುವವರ ವಿರುದ್ಧ ಪೀರನವಾಡಿ ವಿನಾಯಕ ನಗರದ ನಿವಾಸಿಗಳು ಸಿಡಿದೆದ್ದಿದ್ದಾರೆ. ಪೊಲೀಸ್ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.