ಬಳ್ಳಾರಿ, ಜೂನ್ 23: ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣರಾದ ಹದಿನೇಳು ಶಾಸಕರ ಪೈಕಿ ಕೆಲವರು ಮರಳಿಗೂಡಿಗೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ, ಪಕ್ಷ ದ್ರೋಹಿಗಳನ್ನು ಯಾವ ಕಾರಣಕ್ಕೂ ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.
ಇದರ ಜೊತೆಗೆ, ಸಿದ್ದರಾಮಯ್ಯ ಭಾವೀ ಸಿಎಂ ಎನ್ನುವ ಕಾಂಗ್ರೆಸ್ಸಿನ ಕೆಲವು ಶಾಸಕರ ಹೇಳಿಕೆಗೂ ಸ್ಪಷ್ಟನೆ ಕೊಟ್ಟಿರುವ ಸಿದ್ದರಾಮಯ್ಯ, ಅದು ಅವರವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.
ಎರಡು ವಿಚಾರದ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, “ಮುಂದಿನ ಮುಖ್ಯಮಂತ್ರಿ ಯಾರೆಂಬ ಬಗ್ಗೆ ನಮ್ಮ ಪಕ್ಷದ ಕೆಲವು ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯ ಅವರ ವೈಯಕ್ತಿಕ ಅಭಿಪ್ರಾಯ, ಪಕ್ಷದ ನಿಲುವಲ್ಲ.
ಚುನಾವಣೆಯಲ್ಲಿ ಬಹುಮತ ಬಂದ ನಂತರ ಮುಖ್ಯಮಂತ್ರಿ ಯಾರೆಂದು ಶಾಸಕಾಂಗ ಪಕ್ಷದ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನಿಸಲಿದೆ. ಈಗಲೇ ಮುಖ್ಯಮಂತ್ರಿ ಸ್ಥಾನದ ಬಗೆಗಿನ ಚರ್ಚೆ ಅನವಶ್ಯಕ”ಎಂದು ಹೇಳಿದ್ದಾರೆ.
ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಪ್ರಯತ್ನ
“ಮುಂದಿನ ಚುನಾವಣೆಯಲ್ಲಿ ಗೆದ್ದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮ ಮುಂದಿರುವ ಮುಖ್ಯ ಗುರಿ. ನಮ್ಮ ಎಲ್ಲ ನಾಯಕರು ಈ ಗುರಿಸಾಧನೆಗೆ ತಮ್ಮದೆ ರೀತಿಯಲ್ಲಿ ಕೆಲಸಮಾಡುತ್ತಿದ್ದಾರೆ. ಎದುರಾಳಿ ಪಕ್ಷಗಳು ನಮ್ಮ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ಪ್ರಯತ್ನ ಮಾಡುತ್ತಿದೆ. ಅವರ ದುರುದ್ದೇಶ ಈಡೇರುವುದಿಲ್ಲ”ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಭಿನ್ನಮತ ಸ್ಪೋಟಗೊಂಡು ಇನ್ನೂ ಉರಿಯುತ್ತಿದೆ
“ಆಡಳಿತಾರೂಢ @BJP4Karnataka ಯಲ್ಲಿ ಭಿನ್ನಮತ ಸ್ಪೋಟಗೊಂಡು ಇನ್ನೂ ಉರಿಯುತ್ತಿದೆ. ದೆಹಲಿಯಿಂದ ಬಂದ ಪ್ರತಿನಿಧಿಯೂ ಕೈಚೆಲ್ಲಿ ಹಿಂದಿರುಗಿದ್ದಾರೆ. ಈ ಒಳಜಗಳದಿಂದಾಗಿ ಇಡೀ ಸರ್ಕಾರ ಸ್ಥಬ್ದವಾಗಿದೆ. ಈ ವೈಫಲ್ಯದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಕಾಂಗ್ರೆಸ್ ಪಕ್ಷದ ನಾಯಕರ ನಡುವೆ ಜಗಳ ತಂದು ಹಾಕಲು ಬಿಜೆಪಿ ಪ್ರಯತ್ನಿಸುತ್ತಿದೆ”ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆರೋಪಿಸಿದ್ದಾರೆ.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ
“ಕೊರೊನಾ ಸೋಂಕಿತರ ಸಾವಿನ ಬಗ್ಗೆ @BJP4Karnataka ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳು ಸಂಪೂರ್ಣ ಸುಳ್ಳು. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೆ 24 ಮಂದಿ ಸಾವಿಗೀಡಾದಾಗ, ದುರಂತದಲ್ಲಿ ಸತ್ತವರ ಸಂಖ್ಯೆ ಕೇವಲ 4 ಎಂದು ಸುಳ್ಳು ಹೇಳಿತ್ತು. ಸರ್ಕಾರದ ಸುಳ್ಳು ಲೆಕ್ಕಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೇ”ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
“ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದವರು
“ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, @BJP4Karnataka ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಅವರು ಬಾಂಬೆಗಾದ್ರೂ ಹೋಗಲಿ, ದೆಹಲಿಗಾದ್ರೂ ಹೋಗಲಿ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ”ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ಸ್ಪಷ್ಟನೆಯನ್ನು ನೀಡಿದ್ದಾರೆ.
ಅಧಿಕಾರದಾಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, @BJP4Karnataka ಸೇರಿರುವ ಶಾಸಕರನ್ನು ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ.
ಅವರು ಬಾಂಬೆಗಾದ್ರೂ ಹೋಗಲಿ, ದೆಹಲಿಗಾದ್ರೂ ಹೋಗಲಿ. ಅವರ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. 5/5 #Ballari— Siddaramaiah (@siddaramaiah) June 22, 2021