ಕೊರೊನಾ ಎರಡನೇ ತಡೆಯಲು ರಾಜ್ಯ ಸರ್ಕಾರವು 14 ದಿನಗಳ ಕಟ್ಟುನಿಟ್ಟಿನ ಕರ್ಫ್ಯೂ ಜಾರಿ ಮಾಡಿದೆ. ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆ, ಬಹುಪಾಲು ವ್ಯಾಪಾರ ವಹಿವಾಟುಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ.
ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ಈಗಾಗಲೇ ಬಂದ್ ಮಾಡಿರುವ ರಾಜ್ಯ ಸರ್ಕಾರ ಇದೀಗ ಚಿತ್ರೀಕರಣವನ್ನು ಸಹ ಬಂದ್ ಮಾಡುವಂತೆ ಆದೇಶ ಹೊರಡಿಸಿದೆ. ಕೊರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಹಲವು ಮಾರ್ಗಸೂಚಿಗಳನ್ನು ಹೊರಡಿಸಿರುವ ರಾಜ್ಯ ಸರ್ಕಾರ ಚಿತ್ರೀಕರಣದ ಮೇಲೆಯೂ ನಿರ್ಬಂಧ ಹೇರಿದೆ.
ಸಿನಿಮಾ, ಧಾರಾವಾಹಿ, ರಿಯಾಲಿಟಿ ಶೋ ಅಥವಾ ಇನ್ನಿತರೆ ಚಿತ್ರೀಕರಣಗಳು ಮುಂದಿನ ಹದಿನಾಲ್ಕು ದಿನದವರೆಗೆ ಬಂದ್ ಆಗಿರಲಿವೆ. ಸರ್ಕಾರದ ಮಾರ್ಗಸೂಚಿಗೆ ಬಿಗ್ಬಾಸ್ ರಿಯಾಲಿಟಿ ಶೋ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಎರಡು ವಾರ ಚಿತ್ರೀಕರಣ ಮಾಡದಿದ್ದಲ್ಲಿ ಹಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸಲಿವೆ ಅಥವಾ ಹಳೆಯ ಎಪಿಸೋಡ್ಗಳನ್ನು ಪುನಃ ಪ್ರದರ್ಶಿಸಲಿವೆ. ಕೆಲವು ಧಾರಾವಾಹಿಗಳು ಎಪಿಸೋಡ್ ಬ್ಯಾಂಕ್ ಮಾಡಿಕೊಂಡಿರುವ ಕಾರಣ ನಿಲ್ಲದೆ ಪ್ರಸಾರ ಕಾಣಲಿವೆ.
ಈಗಾಗಲೇ ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ಚಿತ್ರೋದ್ಯಮ ನಷ್ಟದಲ್ಲಿದೆ. ಇದೀಗ ಚಿತ್ರೀಕರಣ ಸಹ ಬಂದ್ ಆಗಿರುವ ಕಾರಣ ಚಿತ್ರಕಾರ್ಮಿಕರಿಗೆ ದೊಡ್ಡ ಪೆಟ್ಟು ಬೀಳಲಿದೆ. ಕಳೆದ ಬಾರಿ ಚಿತ್ರೀಕರಣ ಬಂದ್ ಮಾಡಿದಾಗ ಚಿತ್ರಕಾರ್ಮಿಕರು ಬಹಳ ಸಂಕಷ್ಟ ಎದುರಿಸಿದ್ದರು.