ಬೆಂಗಳೂರು, ಫೆಬ್ರವರಿ 15: ಚಿನ್ನಾ, ನೀನು ದುಡ್ಡು ಸಂಪಾದನೆ ಮಾಡಿಕೊಂಡು ಬಾ. ನಾವಿಬ್ಬರೂ ಎಲ್ಲಾದರೂ ಹೋಗಿ ರಾಯಲ್ ಲೈಫ್ ಲೀಡ್ ಮಾಡೋಣ ! ಎಟಿಎಂ ಗೆ ತುಂಬ ಬೇಕಿದ್ದ 64 ಲಕ್ಷ ರೂ. ಹಣ ಸಮೇತ ಎಸ್ಕೆಪ್ ಆಗಿ ಸಿಕ್ಕಿಬಿದ್ದ ಚಾಲಕ ಯೋಗೀಶ್ ಈ ಕೃತ್ಯ ಎಸಗಲು ಪ್ರೇರಣೆ ನೀಡಿದ್ದು ಅತ್ತೆಯ ಮಗಳು. ಮತ್ತು ಆಕೆಯ ಪ್ರೀತಿ ! ಅಪರಾಧ ಎಸಗಿ ಜೈಲು ಸೇರಿರುವ ಯೋಗೀಶ್ ಇದೀಗ ಹೆಂಡತಿ ಮಕ್ಕಳಿಗೆ ಆನ್ಯಾಯ ಮಾಡಿದೆ ಎಂದು ಕಂಬಿ ಹಿಂದೆ ಗೋಳಾಡುತ್ತಿದ್ದಾನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರು ಬೂಕನಕೆರೆಯ ಯೋಗೀಶ್ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಮಹತ್ವದ ಸಂಗತಿ ಇಲ್ಲಿದೆ ನೋಡಿ.
ತೆಲೆ ಕೆಟ್ಟಿತ್ತು ಸಾ: ಮಕ್ಕಳೊಂದಿಗೆ ನಂದಿನಿ ಬಡಾವಣೆಯಲ್ಲಿ ವಾಸವಾಗಿದ್ದ ಸೆಕ್ಯೂರ್ ವಾಲ್ಯೂ ಕಂಪನಿ ಚಾಲಕ ಯೋಗೀಶ್ ವಿಚಾರಣೆ ವೇಳೆ ಪೊಲೀಸರ ಮುಂದೆ ಸತ್ಯ ಹೇಳಿಕೊಂಡು ಗೋಳಾಡುತ್ತಿದ್ದಾನೆ. ಮುಂಬಯಿನಲ್ಲಿರುವ ಪತಿಯಿಂದ ದೂರವಾಗಿದ್ದ ಅತ್ತೆ ಮಗಳ ಬಗ್ಗೆ ಯೋಗೀಶ್ ಗೆ ಮಮಕಾರ ಉಕ್ಕಿ ಹರಿಯುತ್ತಿತ್ತು.
ಇಬ್ಬರು ನಡುವೆ ಪರಸ್ಪರ ಮಾತುಕತೆ ಪ್ರೇಮಕ್ಕೆ ತಿರುಗಿತ್ತು. ಮಕ್ಕಳು ಇದ್ದರೂ ಅತ್ತೆ ಮಗಳ ರೂಪಕ್ಕೆ ಯೋಗೀಶ್ ಮಾರು ಹೋಗಿದ್ದ. ಒಮ್ಮೆ ಇಬ್ಬರೂ ಪರಸ್ಪರ ಮದುವೆಯಾಗುವ ಬಗ್ಗೆ ಮಾತನಾಡಿಕೊಂಡಿದ್ದರು. ಅತ್ತೆ ಮಗಳ ಪ್ರೀತಿಗೆ ಆಸೆ ಬಿದ್ದು ಏನು ಬೇಕಾದರೂ ಮಾಡಲಿಕ್ಕೆ ತಯಾರಾದ ಯೋಗೀಶ್ ಎಟಿಎಂಗೆ ಹಾಕುವ ಹಣ ಎಗರಿಸಿದ್ದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾನೆ.
ನಾವಿಬ್ಬರೂ ಜತೆಯಾಗಿ ಸಂಸಾರ ಮಾಡಬೇಕಾದರೆ ದುಡ್ಡು ಬೇಕು. ಹಣ ಕದ್ದು ಬಾ.. ಇಬ್ಬರು ಓಡಿ ಹೋಗೋಣ. ರಾಯಲ್ ಲೈಫ್ ಮಾಡಬಹುದು. ಪೊಲೀಸರು ಹುಡುಕಿದರೂ ಸ್ವಲ್ಪ ದಿನ ಹುಡುಕಾಡಬಹುದು. ಅಮೇಲೆ ಸುಮ್ಮನಾಗ್ತಾರೆ ಎಂದು ಅತ್ತೆ ಮಗಳು ಹೇಳಿದ್ದಾಳೆ. ಅದನ್ನೇ ಗಂಭೀರವಾಗಿ ಸ್ವೀಕರಿಸಿದ ಸೆಕ್ಯೂರ್ ವಾಲ್ಯೂ ಕಂಪನಿ ಚಾಲಕ ಯೋಗಿಶ್ ಸಮಯಕ್ಕಾಗಿ ಕಾಯುತ್ತಿದ್ದ. ಆತನ ಅದೃಷ್ಟಕ್ಕೆ ಸೆಕ್ಯುರಿಟಿ ಗಾರ್ಡ್ ಗಳು ಭದ್ರತೆಗೆ ನಿಯೋಜನೆಯಾಗಿರಲಿಲ್ಲ.
ಎಟಿಎಂನ 64 ಲಕ್ಷ ರೂ. ಹಣ ಎಗರಿಸಿ ಪತ್ನಿ ಮನೆಗೆ ಹೋಗಿದ್ದ ಯೋಗೀಶ್, ಕೆಲಸದ ನಿಮಿತ್ತ ಧರ್ಮಸ್ಥಳಕ್ಕೆ ಹೋಗುತ್ತಿರುವುದಾಗಿ ಹೇಳಿ ಪರಾರಿಯಾಗಿದ್ದ. ಹಣದ ಸಮೇತ ಅತ್ತೆ ಮಗಳನ್ನು ಕರೆದೊಯ್ದಿದ್ದ. ಮೈಸೂರಿನಲ್ಲಿ ಸ್ನೇಹಿತರ ನೆರವು ಪಡೆದು ವಾಸ್ತವ್ಯ ಹೂಡಿದ್ದ ಯೋಗೀಶ್ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದ. ಇದೀಗ ಅತ್ತೆ ಮಕ್ಕಳ ಕುಮ್ಮಕ್ಕಿನಿಂದಲೇ ಈ ಕೃತ್ಯ ಮಾಡಿದೆ ಎಂದು ತಪ್ಪೊಪ್ಪಿಕೊಂಡು ಗೋಳಾಡುತ್ತಿದ್ದಾನೆ.
ಹೆಂಡತಿ ಮಕ್ಕಳ ಬಗ್ಗೆ ಆಲೋಚಿಸದ ಯೋಗೀಶ್ ಇದೀಗ ಜೈಲು ಸೇರಿದ್ದು, ಆತನ ಬಿಡುಗಡೆಗಾಗಿ ಹೆಂಡತಿ ಪರದಾಡುತ್ತಿದ್ದಾಳೆ. ಇದನ್ನು ನೆನದು ಯೋಗೀಶ್ ಕೂಡ ಪರದಾಡುತ್ತಿದ್ದಾನೆ. ಹಿರಿಯರು ಹೇಳಿದ ಗಾದೆ ಮಾತಿನಂತೆ ಆಗಿದೆ ಯೋಗೀಶ್ ಜೀವನ. ಎಟಿಎಂ ಗೆ ತುಂಬ ಬೇಕಿದ್ದ ಹಣ ಇರುವ ವರೆಗೂ ಅತ್ತೆ ಮಗಳು ಜತೆಗಿದ್ದಳು. ಇದೀಗ ಪೊಲೀಸರಿಗೆ ಸಿಕ್ಕಿ ಜೈಲಿಗೆ ಹೋಗಿರುವ ಯೋಗೀಶ್ ನನ್ನು ಬಿಡಿಸಿಕೊಳ್ಳಲು ಯೋಗೀಶ್ ಪತ್ನಿ ಪರದಾಡುತ್ತಿದ್ದಾರೆ.