ಬಳ್ಳಾರಿ: ಶಾಸಕ ಭರತ ರೆಡ್ಡಿ ನೇತೃತ್ವದಲ್ಲಿ ನಿನ್ನೆ ಇಲ್ಲಿ ಗುಂಡಾಗರ್ದಿ ನಡೆದಿದೆ. ಸಾವಿರಾರು ಗೂಂಡಾಗಳನ್ನು ಕರೆತಂದು ಗೂಂಡಾಗಿರಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಬ್ಯಾನರ್ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಬಳ್ಳಾರಿಗೆ ಆಗಮಿಸಿದ ಅವರು, ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಸತೀಶ್ ರೆಡ್ಡಿ ಅನ್ನೋ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿ ಫೈರ್ ಮಾಡಿರುವ ಮಾಹಿತಿ ಇದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಗುಂಡಾಗರ್ದಿ ಮೂಲಕ ನಮ್ಮ ನಾಯಕರನ್ನು ಹೆದರಿಸುವ ಕೆಲಸ ಆಗಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು, ಆನಂದ್ ಸಿಂಗ್ ಅವರನ್ನು ಹೆದರಿಸುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಯಾರೂ ಹೆದರುವುದಿಲ್ಲ. ನಮ್ಮ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ” ಎಂದರು.
“ವಾಲ್ಮೀಕಿ ಪುತ್ಥಳಿ ವಿಚಾರವಾಗಿ ಗಲಾಟೆ ಮಾಡಿದ ಕಾಂಗ್ರೆಸ್ ಶಾಸಕರಿಗೆ ನಾಚಿಕೆ ಆಗಬೇಕು. ಮಹರ್ಷಿ ವಾಲ್ಮೀಕಿಯನ್ನು ಪೂಜಿಸಬೇಕು ಅನ್ನೋ ಕಾರಣಕ್ಕೆ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೀರಾಮುಲು ಮನವಿ ಮೇರೆಗೆ ವಾಲ್ಮೀಕಿ ಜಯಂತಿ ಘೋಷಿಸಿ, ರಜಾ ದಿನ ಘೋಷಣೆ ಮಾಡಿದ್ದರು. ವಾಲ್ಮೀಕಿ ಭವನಕ್ಕೆ ಹಣ ಕೊಡಿಸಿದ್ದು ರಾಮುಲು ಅವರು. 25 ವರ್ಷದ ಹಿಂದೆಯೇ ಎಸ್ಪಿ ಸರ್ಕಲ್ನಲ್ಲಿ ಪುತ್ಥಳಿ ಇತ್ತು. ಆದರೆ, ಇವತ್ತು ರಾಜಕೀಯ ತೆವಲಿಗಾಗಿ ಬ್ಯಾನರ್ ಹಾಕಿದ್ದಾರೆ” ಎಂದು ಕಿಡಿಕಾರಿದರು.
“ಜನಾರ್ದನ ರೆಡ್ಡಿ ಮನೆ ಮೇಲೆ ಖಾಸಗಿ ವ್ಯಕ್ತಿಗಳು ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ. ಸಿಎಂ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತಂದಿದ್ದಾರೆ. ಈಗ ಮೊದಲ ಆರೋಪಿ ಭರತ್ ರೆಡ್ಡಿ. ಶಾಸಕನನ್ನು ಒದ್ದು ಒಳಗೆ ಹಾಕಿ” ಎಂದು ವಿಜಯೇಂದ್ರ ಆಗ್ರಹಿಸಿದರು.
Laxmi News 24×7