ಕಾರವಾರ, ಡಿಸೆಂಬರ್ 06: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಮತ್ತು ಸಿಬ್ಬಂದಿ ನಡುವೆ ಕಾದಾಟವಾಗಿದ್ದು, ಮೂವರು ಸಿಬ್ಬಂದಿ ಮೇಲೆ ಕೈದಿಗಳು ದಾಳಿ ನಡೆಸಿದ ಘಟನೆ ಇಂದು ನಡೆದಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ನಗರ ಠಾಣೆಯ ಪೊಲೀಸರು ತಕ್ಷಣ ಜೈಲಿಗೆ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಮೂವರು ಸಿಬ್ಬಂದಿ ಮೇಲೆ ದಾಳಿ ನಡೆಸಿದ ಕೈದಿಗಳು
ಕಾರವಾರ ಜೈಲಿನಲ್ಲಿ ತಂಬಾಕು ಮತ್ತು ಇನ್ನಿತರೆ ಮದಕ ವಸ್ತುಗಳ ಬಳಕೆಗೆ ಆಸ್ಪದ ನೀಡದ ಕಾರಣಕ್ಕೆ ಜೈಲಿನ ಮೂವರು ಸಿಬ್ಬಂದಿ ಮತ್ತು ಜೈಲರ್ ಮೇಲೆ ಕೈದಿಗಳು ಹಲ್ಲೆಗೆ ಮುಂದಾಗಿದ್ದರು. ದಾಳಿ ನಡೆಸಿದವರನ್ನು ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಎಂದು ಗುರುತಿಸಲಾಗಿದೆ. ಘಟನೆ ತಿಳಿದ ಕೂಡಲೆ 20 ಕ್ಕೂ ಹೆಚ್ಚು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪರಿಸ್ಥಿತಿಯನ್ನು ಹಿಡಿತಕ್ಕೆ ತಂದಿದ್ದಾರೆ.
ಮಂಗಳೂರಿನಲ್ಲಿಯೂ IPS ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದ ಆರೋಪಿ
ದಾಳಿ ಮಾಡಿದ ಮೂವರು ಕೈದಿಗಳಲ್ಲಿ ಆರೋಪಿ ಫಯಾನ್ ಈ ಹಿಂದೆಯೂ ಮಂಗಳೂರಿನ ಜೈಲಿನಲ್ಲಿ ದಾಳಿ ನಡೆಸಿದ್ದು, ಮೊಬೈಲ್ ಹಾಗೂ ತಂಬಾಕು ವಶಪಡಿಸಿಕೊಂಡಿದ್ದಕ್ಕೆ ಕೋಪಗೊಂಡ ಫಯಾನ್, ಅಂದಿನ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ IPS ಅಧಿಕಾರಿ ಶಶಿಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದ. ಇಂದು ಮತ್ತೆ ಕಾರವಾರ ಜೈಲಿನಲ್ಲೂ ತಂಬಾಕಿಗಾಗಿ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವುದು ಆತಂಕ ಹುಟ್ಟಿಸಿದೆ.
Laxmi News 24×7