ಬೆಂಗಳೂರು: ರಾಜ್ಯ ಸರ್ಕಾರ 2026ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆ ಮಂಜೂರಾತಿ ನೀಡಿದೆ. 20 ದಿನಗಳ ಸಾರ್ವತ್ರಿಕ ರಜೆ ಹಾಗೂ 21 ಪರಿಮಿತ ರಜಾ ಪಟ್ಟಿಗೆ ಮಂಜೂರಾತಿ ನೀಡಲಾಗಿದೆ.
ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಮಹಾ ಶಿವರಾತ್ರಿ (15.02.2026), ಮಹರ್ಷಿ ವಾಲ್ಮೀಕಿ ಜಯಂತಿ (25.10.2026), ಕನ್ನಡ ರಾಜ್ಯೋತ್ಸವ (01.11.2026) ಹಾಗೂ ನರಕ ಚತುರ್ದಶಿ (08.11.2026) ಮತ್ತು ಎರಡನೇ ಶನಿವಾರದಂದು ಬರುವ ಮಹಾಲಯ ಅಮವಾಸ್ಯೆ (10.10.2026) ಯನ್ನು ನಮೂದಿಸಿಲ್ಲ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸ್ಲಿಂ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸ್ಲಿಮರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು. 03.09.2026 (ಗುರುವಾರ) ಕ್ರೈಲ್ ಮೂಹೂರ್ತ, 18.10.2026 (ಭಾನುವಾರ) ತುಲಾ ಸಂಕ್ರಮಣ ಹಾಗೂ 26.11.2026 (ಗುರುವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
21 ಪರಿಮಿತ ರಜಾದಿನ: 2026ರ ಸಾಲಿನಲ್ಲಿ 21 ಪರಿಮಿತ ರಜಾ ಪಟ್ಟಿಗೆ ಸಂಪುಟ ಸಭೆ ಮಂಜೂರಾತಿ ನೀಡಿದೆ. ಈ ರಜಾ ಪಟ್ಟಿಯಲ್ಲಿ ತುಲಾ ಸಂಕ್ರಮಣ (18.10.2026) ಭಾನುವಾರದಂದು ಬರುವುದರಿಂದ ಈ ರಜೆ ಪಟ್ಟಿಯಲ್ಲಿ ನಮೂದಿಸಿಲ್ಲ. 14.04.2026ರ ಮಂಗಳವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯ ಸಾರ್ವತ್ರಿಕ ರಜೆಯಂದು ಬರುವ ಸೌರಮಾನ ಯುಗಾದಿ, 01.05.2026ರ ಶುಕ್ರವಾರ ಕಾರ್ಮಿಕ ದಿನಾಚರಣೆಯ ಸಾರ್ವತ್ರಿಕ ರಜೆಯಂದು ಬರುವ ಬುದ್ಧ ಪೂರ್ಣಿಮ, 26.08.2026ರ ಬುಧವಾರ ಈದ್-ಮಿಲಾದ್ ಸಾರ್ವತ್ರಿಕ ರಜೆಯಂದು ಬರುವ ಋಗ್ ಉಪಕರ್ಮ/ತಿರುಓಣಂ ಹಾಗೂ 14.09.2026ರ ಸೋಮವಾರ ವರಸಿದ್ಧಿ ವಿನಾಯಕ ವ್ರತ ಸಾರ್ವತ್ರಿಕ ರಜೆಯಂದು ಬರುವ ಸ್ವರ್ಣಗೌರಿ ವ್ರತವು ಪರಿಮಿತ ರಜಾ ಪಟ್ಟಿಯಲ್ಲಿ ನಮೂದಾಗಿಲ್ಲ.
ಮೇಕೆದಾಟು ಮುಂದಿನ ಸಿದ್ಧತೆಗೆ ಸೂಚನೆ: ಮೇಕೆದಾಟು ಯೋಜನೆ ವಿಚಾರದಲ್ಲಿ ಪಾದಯಾತ್ರೆ, ರಾಜಕೀಯ ಹೋರಾಟ ಹಾಗೂ ಕಾನೂನಾತ್ಮಕ ಹೋರಾಟ ಮಾಡಲಾಗಿದೆ. ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಮಾಡಿದೆ. ಆ ಮೂಲಕ ಮೇಕೆದಾಟು ಯೋಜನೆಗೆ ಮುಂದಿನ ಹೆಜ್ಜೆ ಇಡಲು ಹಸಿರು ನಿಶಾನೆ ತೋರಿದಂತಾಗಿದೆ. ಈ ಸಂದರ್ಭದಲ್ಲಿ ಸಿಎಂ, ಡಿಸಿಎಂಗೆ ಅಭಿನಂದನೆ ಸಲ್ಲಿಸಲಾಯಿತು. ಯೋಜನೆಯ ಅನುಷ್ಠಾನ ಸಂಬಂಧ ಮುಂದಿನ ಸಿದ್ಧತೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದರು.
Laxmi News 24×7