ಬೆಂಗಳೂರು: ಪಟಾಕಿ ಕಿಡಿ ತಾಗಿದ್ದಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ ಇಬ್ಬರು ಬಾಲಕರು ಸೇರಿ ಐವರನ್ನ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹಲ್ಲೆಗೊಳಗಾದ ಕಿರಣ್ ಎಂಬುವರು ನೀಡಿದ ದೂರಿನ ಮೇರೆಗೆ ಅಮೀನ್ ಶರೀಫ್, ಸೈಯ್ಯದ್ ಅರ್ಬಾಜ್ ಹಾಗೂ ಸೈಯದ್ ಖಾದರ್ ಎಂಬುವವರನ್ನ ಬಂಧಿಸಲಾಗಿದೆ. ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರನ್ನ ರಿಮ್ಯಾಂಡ್ ಹೋಮ್ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಆ. 19ರಂದು ಬೆಳಗ್ಗೆ ಕಿರಣ್ ಅವರು ಮನೆ ಮುಂದೆ ಪಟಾಕಿ ಹೊಡೆಯುವಾಗ ಬೈಕ್ನಲ್ಲಿ ಬರುತ್ತಿದ್ದ ಆರೋಪಿಯೊಬ್ಬನಿಗೆ ಪಟಾಕಿ ಕಿಡಿ ತಾಕಿದೆ. ಇದರಿಂದ ಅಸಮಾಧಾನಗೊಂಡ ಆತ ಕಿರಣ್ರೊಂದಿಗೆ ವಾಗ್ವಾದ ನಡೆಸಿದ್ದ. ಬಳಿಕ ರಾತ್ರಿ 9 ಗಂಟೆ ಸುಮಾರಿಗೆ ಹುಡುಗರನ್ನ ಮಾರಕಾಸ್ತ್ರಗಳ ಸಮೇತ ಕರೆಯಿಸಿಕೊಂಡಿದ್ದ. ನಂತರ ಆ ಹುಡುಗರು ಕಿರಣ್ ಮೇಲೆ ಲಾಂಗ್ನಿಂದ ಹಲ್ಲೆ ಮಾಡಿದ್ದಾರೆ. ಇದನ್ನ ತಡೆಯಲು ಬಂದ ಸ್ನೇಹಿತ ಭರತ್ ಮೇಲೆಯೂ ಪ್ರಹಾರ ನಡೆಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಐವರ ಗುಂಪು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡುತ್ತಿದ್ದಂತೆ ಸ್ಥಳೀಯರು ಮೂವರನ್ನು ಹಿಡಿದಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಲೀಸ್ ಕಸ್ಟಡಿಗೆ ಪಡೆದು ಲಾಂಗ್ ಎಲ್ಲಿಂದ ಬಂತು? ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಸಾರ್ವಜನಿಕ ಪ್ರದೇಶಗಳಲ್ಲಿ ಲಾಂಗ್ ಹಿಡಿದು ಸಮಾಜದ ಸ್ವಾಸ್ತ್ಯ ಹಾಳುಗೆಡವಿದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ರೌಡಿಶೀಟ್ ತೆರೆಯಲಾಗುವುದು ಎಂದು ಪೂರ್ವ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.