ಬೆಳಗಾವಿ: ಜಿದ್ದಾಜಿದ್ದಿನಿಂದ ಕೂಡಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಹಣಾಹಣಿಯಲ್ಲಿ ಕೊನೆಗೂ ಜಾರಕಿಹೊಳಿ ಸಹೋದರರು ಗೆದ್ದು ಬೀಗಿದ್ದಾರೆ. ಇವರಿಗೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದ ಲಕ್ಷ್ಮಣ್ ಸವದಿ, ರಮೇಶ್ ಕತ್ತಿ ತಾವು ಗೆದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಜಾರಕಿಹೊಳಿ ಬ್ರದರ್ಸ್ ತೆಕ್ಕೆಗೆ ಬಂದಿದೆ.
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಶತಾಯಗತಾಯ ಬ್ಯಾಂಕ್ ಅನ್ನು ಸಂಪೂರ್ಣ ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲು ಪಣ ತೊಟ್ಟಿದ್ದ ಜಾರಕಿಹೊಳಿ ಸಹೋದರರು ಅದರಲ್ಲಿ ಯಶಸ್ವಿ ಆಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬೆಳಗಾವಿ ಹಾಲು ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬಣದ 11 ನಿರ್ದೇಶಕರು ಆಯ್ಕೆಯಾಗಿ ಬಂದಿದ್ದಾರೆ. ಐವರು ಸ್ವತಂತ್ರವಾಗಿ ಗೆದ್ದಿದ್ದಾರೆ.
ನಿನ್ನೆ(ಭಾನುವಾರ) 7 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟವಾಗಿದೆ. ಇನ್ನುಳಿದ ನಾಲ್ಕು ತಾಲೂಕುಗಳ ಕೆಲವೊಂದು ಮತಗಳು ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಅ.28ರಂದು ಫಲಿತಾಂಶ ಪ್ರಕಟ ಆಗಲಿದೆ. ಆದರೆ, ಗೆದ್ದ ಅಭ್ಯರ್ಥಿಗಳ ವಿವರ ಸ್ಪಷ್ಟವಾಗಿದೆ. ಇನ್ನು ಆರಂಭದಲ್ಲಿ 9 ನಿರ್ದೇಶಕರು ಅವಿರೋಧವಾಗಿ ಗೆದ್ದಿದ್ದರು. ಇದರಲ್ಲಿ ಏಳು ಜಾರಕಿಹೊಳಿ ಬ್ರದರ್ಸ್, ಇಬ್ಬರು ಸ್ವತಂತ್ರ ಅಭ್ಯರ್ಥಿಗಳು.
ಜಾರಕಿಹೊಳಿ ಬಣದಿಂದ ಗೆದ್ದವರು: ಜಾರಕಿಹೊಳಿ ಸಹೋದರರ ಬಣದವರಲ್ಲಿ ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಸವದತ್ತಿ ವಿರೂಪಾಕ್ಷ ಮಾಮನಿ, ಖಾನಾಪುರ ಅರವಿಂದ ಪಾಟೀಲ, ಇತರೆ ಕ್ಷೇತ್ರದ ಚನ್ನರಾಜ ಹಟ್ಟಿಹೊಳಿ, ಮೂಡಲಗಿ ನೀಲಕಂಠ ಕಪ್ಪಲಗುದ್ದಿ, ಗೋಕಾಕ ಅಮರನಾಥ ಜಾರಕಿಹೊಳಿ, ಬೆಳಗಾವಿ ರಾಹುಲ್ ಜಾರಕಿಹೊಳಿ ಅವಿರೋಧ ಆಯ್ಕೆಯಾಗಿದ್ದರು.
ಜೊತೆಗೆ, ರಾಯಬಾಗದಿಂದ ಗೆದ್ದ ಅಪ್ಪಾಸಾಹೇಬ ಕುಲಗುಡೆ, ನಿಪ್ಪಾಣಿ ಅಣ್ಣಾಸಾಹೇಬ ಜೊಲ್ಲೆ, ಬೈಲಹೊಂಗಲ ಮಹಾಂತೇಶ ದೊಡ್ಡಗೌಡರ, ಕಿತ್ತೂರು ನಾನಾಸಾಹೇಬ ಪಾಟೀಲ ಇವರದೇ ಬಣದಲ್ಲಿದ್ದಾರೆ.