ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿ ಹಲವು ಬಗೆಯ ಮೇಳಗಳು ಗಮನ ಸೆಳೆಯುತ್ತಿವೆ. ಅದರಲ್ಲೂ ವಿಸ್ಮಯಕಾರಿ ಕೀಟ ಪ್ರಪಂಚ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕೀಟದಲ್ಲಿ ಆಹಾರ, ಆಪರೇಷನ್ ಸಿಂದೂರ ಮಾದರಿ, ಕೀಟಾಭರಣಗಳನ್ನು ಸಹ ತಯಾರಿಸಲಾಗಿದೆ.
ಮಿಡತೆ ಬರ್ಗರ್, ಹುಳು ಪ್ಯೂಪಾ ಸಲಾಡ್, ಸಿಕಾಡ ಡ್ರೈ, ಮಿಶದರ ಕೀಟಗಳ ಡ್ರೈ, ಮಿಡತೆ ಫ್ರೈ, ಸ್ಯಾಂಡ್ವೀಜ್, ಕಪ್ಪು ಸೈನಿಕ್, ಮಿಡತೆ ಮಸಾಲ, ಆಪರೇಷನ್ ಸಿಂದೂರದ ಮಾದರಿ, ಕೀಟಾಭರಣಗಳು ಕೃಷಿ ವಿವಿ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಬೆಳೆಗಳಿಗೆ ಹಾನಿ ಮಾಡುವ ಕೀಟಗಳಿದ್ದರೂ, ಇನ್ನು ಕೆಲವು ಬೆಳೆಗೆ ಉಪಯುಕ್ತವಾಗುವ ಕೀಟಗಳೂ ಇವೆ. ಇದರ ಬಗ್ಗೆ ಮೇಳಕ್ಕೆ ಬಂದ ರೈತರಿಗೆ ಕೀಟ ವಿಭಾಗದ ವಿಜ್ಞಾನಿಗಳು ಮಾಹಿತಿ ನೀಡಿದರು. ಇದರಲ್ಲಿ ಪ್ರಮುಖವಾಗಿ ಕೀಟಗಳ ಪದಾರ್ಥಗಳು ಎಲ್ಲರ ಗಮನ ಸೆಳೆಯಿತು. ಜೇನು ನೋಣದ ಸಿಹಿ, ರೇಷ್ಮೆ ಹುಳು ಪ್ಯೂಪಾ ಟೆಕ್ಕಾ, ಕೀಟ ಮಿಶ್ರಣ ಪಿಜ್ಜಾ, ಖಡ್ಗ ಮೃಗ, ಜೀರುಂಡೆ ಟಿಕ್ಕಾ, ದುಂಬಿ ಡ್ರೈ, ಕೀಟ ಮಿಶ್ರಣ ಟಿಕ್ಕಾ, ರೇಷ್ಮೆ ಕೋಶ ಕಟ್ಲೆಟ್, ಮಿಡತೆ ಪಿಜ್ಜಾ, ಶಿವನ ಕುದುರೆ 65 ಸೇರಿದಂತೆ ಬಗೆ ಬಗೆಯ ಕೀಟಗಳ ಖಾದ್ಯಗಳು ಎಲ್ಲರನ್ನು ಅಚ್ಚರಿ ಮೂಡಿಸುತ್ತಿವೆ.
ಕೀಟಗಳ ಪ್ರದರ್ಶನದಲ್ಲಿ ನೂರಕ್ಕೂ ಬಗೆಯ ಕೀಟಗಳ ಪರಿಚಯ ಮಾಡಿಕೊಡಲಾಯಿತು. ಆದರೆ ಇದೇ ಕೀಟಗಳಿಂದ ಉಗ್ರರನ್ನು ಪತ್ತೆ ಹಚ್ಚಲು, ಭೂಕಂಪ ಸೇರಿದಂತೆ ಹಲವು ದುರಂತ ನಡೆದ ಸಂದರ್ಭದಲ್ಲಿ ಬದುಕಿರುವ ವ್ಯಕ್ತಿಗಳ ಪತ್ತೆಗೂ ಬಳಕೆ ಮಾಡಿಕೊಳ್ಳಬಹುದು.