ಹೈವೋಲ್ಟೆಜ್’ನಿಂದ ವಿದ್ಯುತ್ ಉಪಕರಣಗಳು ಸುಟ್ಟು ಹಾನಿ…
ಹೆಸ್ಕಾಂಗೆ ಹಿಡಿಶಾಪ ಹಾಕಿದ ಬೆಳಗಾವಿ ನಾಲ್ಕನೇ ಗೇಟ್ ಜನರು
ಬೆಳಗಾವಿಯ ನಾಲ್ಕನೇ ರೇಲ್ವೆ ಗೇಟ್ ಬಳಿ ಹೈವೋಲ್ಟೇಜ್’ನಿಂದಾಗಿ ವಿದ್ಯುತ್ ಉಪಕರಣಗಳು ಮತ್ತು ವಿದ್ಯುತ್ ದೀಪಗಳು ಸುಟ್ಟು ಸ್ಥಳೀಯರು ಮತ್ತು ವ್ಯಾಪಾರಿಗಳು ತೀವ್ರ ನಷ್ಟವನ್ನು ಅನುಭವಿಸುವಂತಾಗಿದ್ದು, ಹೆಸ್ಕಾಂ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಬೆಳಗಾವಿಯ ನಾಲ್ಕನೇ ರೇಲ್ವೆ ಗೇಟ್ ಬಳಿಯ ಅನಗೋಳ ಬಾಬಲೆ ಗಲ್ಲಿ ಮತ್ತು ಪ್ರದೇಶದಲ್ಲಿ ನಿನ್ನೆ ಭಾನುವಾರ ಬೆಳಿಗ್ಗೆ ಹೈವೋಲ್ಟೆಜ್’ನಿಂದಾಗಿ ಶಾರ್ಟ್ ಸರ್ಕ್ಯೂಟ್’ಗಳು ಸಂಭವಿಸಿ, ಇಲ್ಲಿನ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಹೆಸ್ಕಾಂನ ಈ ನೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ಕಣ್ಣಾ ಮುಚ್ಚಾಲೆ ಬಳಿಕ ಹೈವೋಲ್ಟೇಜ್ ವಿದ್ಯುತ್ ಪ್ರವಾಹಗೊಂಡು ಎಲ್ಲ ವಿದ್ಯುತ್ ದೀಪಗಳು ಉರಿದು ಹೋದವು. ನಿನ್ನೆಯಿಂದ ನಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೆಸ್ಕಾಂಗೆ ಮಾಹಿತಿ ತಿಳಿಸುತ್ತಿದ್ದಂತೆ ಬಂದು ಸರಿಯಾಗಿ ದುರಸ್ಥಿಗೊಳಿಸದ ಹಿನ್ನೆಲೆ ಈ ಅವಘಡ ಸಂಭವಿಸಿದೆ. ಬಿಲ್ ತುಂಬದಿದ್ದಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಹೆಸ್ಕಾಂ ಶಾಶ್ವತ ಪರಿಹಾರ ಕಂಡುಕೊಳ್ಳದೇ ಜನರನ್ನು ತೊಂದರೆಗೆ ಸಿಲುಕಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ವಿದ್ಯುತ್ ಹೈವೋಲ್ಟೇಜ್’ನಿಂದಾಗಿ ಇಲ್ಲಿನ ವ್ಯಾಪಾರಿಗಳು ಕೂಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿರುವ ಡೈರಿಯಲ್ಲಿನ ಕ್ಯಾಮೆರಾ ಮತ್ತು ಲೈಟ್’ಗಳು ಕೂಡ ಸುಟ್ಟು ಹೋಗಿವೆ. ಅಲ್ಲದೇ, ವಿದ್ಯುತ್ ಸಂಪರ್ಕಗೊಂಡಿದ್ದರಿಂದ ತಮ್ಮ ಉತ್ಪಾದನೆಗಳು ಕೂಡ ಹಾಳಾಗಿವೆ. ಸುಮಾರು 150 ಲೀಟರ್ ಹಾಲು ಒಡೆದು ಹೋದವು. ಹೆಸ್ಕಾಂ ಪರಿಹಾರ ವಿತರಿಸಲಿ ಎಂದು ಡೈರಿಯ ಸಂಚಾಲಕ ಸುನೀಲ್ ಅನಗೋಳಕರ ಹೇಳಿದರು.