ರಾಯಚೂರು, ಏಪ್ರಿಲ್ 20: ಸಿಇಟಿ ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳ ಜನಿವಾರ ತೆಗೆಸಿದ್ದಕ್ಕೆ
ಮಂತ್ರಾಲಯ ಶ್ರೀಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ಹಾಕಿಕೊಳ್ಳೋದು ಧರ್ಮ ಮತ್ತು ಸಂಪ್ರದಾಯದ ಸಂಕೇತವಾಗಿದೆ. ಪರೀಕ್ಷೆ ವೇಳೆ ವಿದ್ಯಾರ್ಥಿಯ ಜನಿವಾರ ತೆಗೆಸಿರುವುದು ಖಂಡನೀಯವಾಗಿದೆ. ಸಂವಿಧಾನದಲ್ಲಿ ಅವರವರ ಸಂಪ್ರದಾಯ ಆಚರಿಸುವ ಅವಕಾಶ ಇದೆ. ದೇಶದ ಸಂವಿಧಾನದ ಬಗ್ಗೆ ಮಾತನಾಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಸಂವಿಧಾನದ ವಿಚಾರ ಹರಣ ಕೆಲಸವಾಗುತ್ತಿದೆ. ಈ ದ್ವಂದ್ವ ನಿಲುವು ಖಂಡನೀಯ ಎಂದು ಹೇಳಿದರು.
ಕೇವಲ ಬ್ರಾಹ್ಮಣ ಸಮುದಾಯ ಅಲ್ಲ ಬೇರೆ ಯಾವುದೇ ಸಮುದಾಯ ಧರ್ಮ ವಿರೋಧಿ ಚಟುವಟಿಕೆಗಳನ್ನು ಮಾಡುವುದು ಹೇಯ ಕೃತ್ಯ. ನಾವೆಲ್ಲ ಇದನ್ನು ಒಕ್ಕೊರಲಿನಿಂದ ಖಂಡಿಸುತ್ತೇವೆ, ಪ್ರತಿಭಟಿಸುತ್ತೇವೆ. ಇದು ಪುನರಾವರ್ತನೆಯಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ವಿದ್ಯಾರ್ಥಿ ಭವಿಷ್ಯ ಹಾಳಾಗಿರುವುದರ ಜೊತೆಗೆ ಧರ್ಮಕ್ಕೆ ಚ್ಯುತಿ ಬಂದಿದೆ. ಸಚಿವರು, ಶಾಸಕರು ಸರಿಪಡಿಸುತ್ತೇವೆ ಅನ್ನೋದು ಕಣ್ಣೊರಿಸುವ ತಂತ್ರ. ಈ ಮೂಲಕ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕಟುವಾಗಿ ತಿಳಿಸುತ್ತೇವೆ. ಯಾವುದೇ ಜನಪ್ರತಿನಿಧಿ ಅಥವಾ ಸಚಿವರು ಎಚ್ಚೆತ್ತುಕೊಂಡು ಸ್ಪಂದಿಸಿ. ಧರ್ಮ ವಿರೋಧಿ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕ ಸರ್ವಧರ್ಮದ ಶಾಂತಿಯ ತೋಟ. ಸರ್ಕಾರ ತಕ್ಷಣ ಗಮನಿಸಿ ವಿದ್ಯಾರ್ಥಿಗೆ ಪರಿಹಾರ ಮಾಡಿಕೊಡಬೇಕು. ರಾಜ್ಯಾದ್ಯಂತ ಬೇರೆ ಧರ್ಮದವರಿಗೆ ಇರದ ಯಾವುದೇ ನಿಯಮಗಳು, ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಮಾಡಿರೋದು ಇದು ಅನ್ಯಾಯ ಎಂದರು