ಬೆಂಗಳೂರು : ಕೊನೆಗೂ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. 161 ತಾಲೂಕುಗಳನ್ನು ತೀವ್ರ ಹಾಗೂ 34 ತಾಲೂಕುಗಳನ್ನು ಸಾಧಾರಣ ಬರಪೀಡಿತ ತಾಲೂಕುಗಳೆಂದು ಘೋಷಿಸಿ ಆದೇಶ ಹೊರಡಿಸಲಾಗಿದೆ.
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲೂಕುಗಳ ಪೈಕಿ 195 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದ್ದು, ಈ ಪೈಕಿ 161 ತಾಲೂಕುಗಳನ್ನು ತೀವ್ರ ಬರಪೀಡಿತ ತಾಲ್ಲೂಕುಗಳು ಮತ್ತು 34 ಸಾಧಾರಣ ಬರಪೀಡಿತ ತಾಲೂಕುಗಳೆಂದು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಘೋಷಿಸಿ ಆದೇಶಿಸಲಾಗಿದೆ.
ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ-2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆ ಹಾನಿ ಸಮೀಕ್ಷೆಯ (Ground Truthing) ವರದಿಯನುಸಾರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಮುಂಗಾರು ಪ್ರವೇಶ ಮತ್ತು ವ್ಯಾಪಿಸಲು ಸಾಮಾನ್ಯ ದಿನಾಂಕಕ್ಕಿಂತ ಒಂದು ವಾರ ತಡವಾಗಿದೆ. ಜೂನ್ ತಿಂಗಳಲ್ಲಿ ಮುಂಗಾರು ದುರ್ಬಲಗೊಂಡು ವಾಡಿಕೆಗಿಂತ ಶೇ.56 ಮಳೆ ಕೊರತೆ ಉಂಟಾಗಿತ್ತು. ಜುಲೈ ತಿಂಗಳಲ್ಲಿ ಮುಂಗಾರು ಚುರುಕುಗೊಂಡು ವಾಡಿಕೆಗಿಂತ ಶೇ.29 ಹೆಚ್ಚು ಮಳೆಯಾಗಿದ್ದು, ಈ ಮಳೆಯು ಕೇವಲ ಒಂದು ವಾರ ಮಾತ್ರ ಕೇಂದ್ರೀಕೃತವಾಗಿತ್ತು. ಆಗಸ್ಟ್ ತಿಂಗಳಲ್ಲಿ ವಾಡಿಕೆಗಿಂತ ಶೇ.73 ಮಳೆ ಕೊರತೆಯಾಗಿದ್ದು, ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ದಾಖಲಾಗಿದೆ.
ಕೇಂದ್ರ ಸರ್ಕಾರದ ಬರ ಕೈಪಿಡಿ 2020 ರ ಅನ್ವಯ ಕಡ್ಡಾಯ ಮತ್ತು ತತ್ಪರಿಣಾಮ ಸೂಚಕಗಳ ನಿರಂತರ ಮೇಲ್ವಿಚಾರಣೆಯ ಆಧಾರದ ಮೇಲೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) 1-06-2023 ರಿಂದ 19-08-2023ರ ಅವಧಿಯ ವರದಿಯಂತೆ ರಾಜ್ಯದಲ್ಲಿ 487 ಮಿ.ಮೀ. ಮಳೆಯಾಗಿದ್ದು, ವಾಡಿಕೆ ಮಳೆ (635 ಮಿ.ಮೀ)ಗೆ ಹೋಲಿಸಿದಾಗ ಶೇ.23 ರಷ್ಟು ಕೊರತೆ ಕಂಡುಬಂದಿದೆ.
ಬರ ಕೈಪಿಡಿ-2020 ರ ಮಾರ್ಗಸೂಚಿಯನ್ವಯ ಬರ ಘೋಷಿಸಲು ಸೂಚಿಸಿರುವ ಕಡ್ಡಾಯ ಮಾನದಂಡಗಳಾದ ಶೇ. 60ಕ್ಕಿಂತ ಹೆಚ್ಚು ಮಳೆ ಕೊರತೆ ಅಥವಾ ಸತತ ಮೂರು ವಾರಗಳಲ್ಲಿ ಶುಷ್ಕ ವಾತಾವರಣ ಹಾಗೂ ತತ್ಪರಿಣಾಮ ಮಾನದಂಡಗಳಾದ ತೇವಾಂಶ ಕೊರತೆ, ಉಪಗ್ರಹ ಆಧಾರಿತ ಬೆಳೆ ಸೂಚ್ಯಂಕ, ಬೆಳೆ ಬಿತ್ತನೆ ಪ್ರದೇಶ ಹಾಗೂ ಜಲಸಂಪನ್ಮೂಲ ಸೂಚ್ಯಂಕದಲ್ಲಿನ ತೀವ್ರತೆಯನ್ನು ಆಧರಿಸಿ ಮೌಲ್ಯಮಾಪನ ಮಾಡಿ, ಒಟ್ಟಾರೆ 113 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ.