ಹೊಸದಿಲ್ಲಿ: ಪೊಲೀಸ್-ಕಾನೂನು ಸುವ್ಯವಸ್ಥೆ, ಜಮೀನು-ಕಟ್ಟಡ ಇಲಾಖೆಯನ್ನು ಬಿಟ್ಟು ಉಳಿದ ಕಡೆ ದಿಲ್ಲಿಯ ಚುನಾಯಿತ ಸರಕಾರದ್ದೇ ನಿರ್ಧಾರ… ಹೀಗೆಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠ ಗುರುವಾರ ತೀರ್ಪು ನೀಡಿದೆ.
ದಿಲ್ಲಿ ಸರಕಾ ರಕ್ಕೆ ಸೇವಾ ಇಲಾಖೆಗಳಲ್ಲೂ ಯಾವುದೇ ಅಧಿಕಾರ ಇಲ್ಲವೆಂದು ನ್ಯಾ|ಎ.ಕೆ. ಸಿಕ್ರಿ ಮತ್ತು ನ್ಯಾ|ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠ 2019ರಲ್ಲಿ ನೀಡಿದ್ದ ತೀರ್ಪನ್ನು ಒಪ್ಪಲು ಕೂಡ ನ್ಯಾಯಪೀಠ ನಿರಾಕರಿಸಿದೆ. ಇದರ ಜತೆಗೆ ಸರಕಾರ ಕೈಗೊಳ್ಳುವ ತೀರ್ಮಾನವನ್ನು ಲೆಫ್ಟಿನೆಂಟ್ ಗವರ್ನರ್ ಒಪ್ಪಿಕೊಳ್ಳಬೇಕು ಎಂದೂ ಹೇಳಿದೆ.
ಇದರಿಂದಾಗಿ ದಿಲ್ಲಿ ವ್ಯಾಪ್ತಿಯಲ್ಲಿ ಚುನಾಯಿತ ಸರಕಾರ ಮೇಲೋ ಅಥವಾ ಲೆಫ್ಟಿನೆಂಟ್ ಗವರ್ನರ್ ಆದೇಶ ಹೆಚ್ಚೋ ಎಂಬ ಬಗ್ಗೆ ಎಂಟು ವರ್ಷಗಳಿಂದ ನಡೆಯುತ್ತಿದ್ದ ಸಂಘರ್ಷ ಮುಕ್ತಾಯವಾಗುವ ಹಂತಕ್ಕೆ ಬಂದಿದೆ.
ದಿಲ್ಲಿ ಸರಕಾರಕ್ಕೆ ಶಾಸನಾತ್ಮಕ ಅಂದರೆ, ಆಡಳಿತಾತ್ಮಕ ಸೇವೆಗಳಲ್ಲಿ ಸರಕಾರಿ ಅಧಿಕಾರಿಗಳ ಮೇಲೆ ನಿಯಂತ್ರಣ, ಐಎಎಸ್ ಅಥವಾ ಜಂಟಿ ಕೇಡರ್ ಸೇವೆಗಳನ್ನು ಹೊಂದಿರುವ ಅಧಿಕಾರಿಗಳ ಮೇಲೆ ನಿಯಂತ್ರಣ ಇದೆ. ಜನರಿಂದಲೇ ಆಯ್ಕೆ ಯಾದ ದಿಲ್ಲಿಯ ವ್ಯಾಪ್ತಿಯ ಶಾಸಕರಿಗೆ ಆ ಪ್ರದೇ ಶದ ಬಗ್ಗೆ ನಿರ್ಧಾರ, ಕಾನೂನುಗಳನ್ನು ಮಾಡಲು ಅವಕಾಶ ಇದೆ. ಹೀಗಾಗಿ ನಿಜವಾದ ಅಧಿಕಾರ ಎನ್ನು ವುದು ಚುನಾಯಿತ ಸರಕಾರದ ವ್ಯಾಪ್ತಿಯಲ್ಲಿಯೇ ಇರಬೇಕು. ಕೇಂದ್ರ ಮತ್ತು ರಾಜ್ಯಗಳೆರಡರ ವ್ಯಾಪ್ತಿ ಯಲ್ಲಿ ವಿಚಾರದಲ್ಲಿ ಜಂಟಿ ನಿರ್ಧಾರ ಅಗತ್ಯ. ಆದರೆ ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಇರುವ ವಿಚಾರಗಳಿಗೆ ಕೇಂದ್ರದ ಮಧ್ಯ ಪ್ರವೇಶ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟ ಮಾತು ಗಳಲ್ಲಿ ಹೇಳಿತು.
ಯಾವುದೇ ವಿಚಾರದಲ್ಲಿ ದಿಲ್ಲಿ ಸರಕಾರಕ್ಕೆ ಅಧಿಕಾರವೇ ಇಲ್ಲ ಎಂಬ ಅಂಶವನ್ನು ತಿರಸ್ಕರಿಸಿದ ನ್ಯಾಯ ಪೀಠ, ಸಾರ್ವಜನಿಕ ಭದ್ರತೆ, ಪೊಲೀಸ್ (ಕಾನೂನು ಮತ್ತು ಸುವ್ಯವಸ್ಥೆ), ಭೂಮಿಯ ವಿಚಾರ ಹೊರತು ಪಡಿಸಿ ಉಳಿದ ಎಲ್ಲ ವಿಚಾರಗಳಲ್ಲಿ ಚುನಾಯಿತ ಸರಕಾರದ ಮಾತು ನಡೆಯಬೇಕು ಎಂದು ತೀರ್ಮಾನ ನೀಡಿದೆ.
ಸಚಿವರ ನಿರ್ದೇಶನಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಮತ್ತು ಅದನ್ನು ಲಕ್ಷಿಸುತ್ತಿಲ್ಲ ಎಂದಾದರೆ ಸಾಮೂಹಿಕ ಜವಾಬ್ದಾರಿ ಎಂಬ ಅಂಶ ಗೌಣವಾಗುತ್ತದೆ ಎಂದು ನ್ಯಾ|ಎಂ.ಆರ್.ಶಾ, ನ್ಯಾ| ಕೃಷ್ಣ ಮು ರಾರಿ, ನ್ಯಾ| ಹಿಮಾ ಕೋಹ್ಲಿ ಮತ್ತು ನ್ಯಾ| ಪಿ.ಎಸ್.ನರಸಿಂಹ ಅವರ ನ್ನೊಳಗೊಂಡ ನ್ಯಾಯಪೀಠ ಅಭಿ ಪ್ರಾಯಪಟ್ಟಿದೆ.
ಲೆ| ಗವರ್ನರ್ ಒಪ್ಪಿಕೊಳ್ಳಬೇಕು: ದಿಲ್ಲಿಯಲ್ಲಿ ಇರುವ ಚುನಾಯಿತ ಸರಕಾರದ ನಿರ್ಧಾರಗಳನ್ನು ಲೆಫ್ಟಿನೆಂಟ್ ಗವರ್ನರ್ ಕೂಡ ಒಪ್ಪಿಕೊಳ್ಳಬೇಕು. ಅವರು ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿ ದ್ದರೂ ಸಚಿವ ಸಂಪುಟದ ನಿರ್ಣಯ ಗಳನ್ನು ಅನು ಸರಿಸಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟ ಪಡಿಸಿದೆ. ಲೆಫ್ಟಿನೆಂಟ್ ಗವರ್ನರ್ಗೆ ಅಧಿಕಾ ರದ ವ್ಯಾಪ್ತಿ ಇದ್ದರೂ ಸಂಪೂರ್ಣ ದಿಲ್ಲಿ ಸರರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದಿದೆ. ಈ ನೀತಿ ಜಾರಿ ಯಾಗಿಲ್ಲ ಎಂದಾದರೆ ಅಲ್ಲಿ ಇರುವ ಚುನಾ ಯಿತ ಸರಕಾರಕ್ಕೆ ಅರ್ಥವೇ ಇರುವುದಿಲ್ಲ. ದಿಲ್ಲಿ ಕೂಡ ಇತರ ರಾಜ್ಯಗಳಿಗೆ ಸಮಾನವಾಗಿಯೇ ಇದೆ ಎಂದು ನ್ಯಾಯಪೀಠ ಖಚಿತವಾಗಿ ಹೇಳಿದೆ.
ವಿಶೇಷ ಬಾಂಧವ್ಯ: ಕೇಂದ್ರ ಮತ್ತು ದಿಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ಸಿಟಿಡಿ)ದ ಸರಕಾರಗಳು ವಿಶೇಷ ಬಾಂಧವ್ಯವನ್ನು ಹೊಂದಿವೆ. ಎರಡು ಸರಕಾರಗಳಿಗೆ ಕೂಡ ಆಡಳಿತ ನಡೆಸಲು ತಮ್ಮದೇ ಆಗಿರುವ ವ್ಯಾಪ್ತಿ ಹೊಂದಿ ರುವುದರ ಜತೆಗೆ ಸಮವರ್ತಿ ಪಟ್ಟಿ (ಕನ್ಕರೆಂಟ್ ಲಿಸ್ಟ್- ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಮಾನ ಅಧಿಕಾರ ಹೊಂದಿರುವ) ವಿಚಾರಗಳಲ್ಲಿ ಸಮಾನ ಅಧಿಕಾರ ಹೊಂ ದಿರಲಿವೆ. ಉತ್ತಮ ಒಕ್ಕೂಟ ಸಹಕಾರ ವ್ಯವಸ್ಥೆ ಹೊಂದುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸೀಮಿತ ವ್ಯಾಪ್ತಿಯಲ್ಲಿ ಅಧಿಕಾರ ಚಲಾಯಿಸಬೇಕು ಎಂದಿದೆ.
2015ರಲ್ಲಿ ಕೇಂದ್ರದ ಆದೇಶವೇನು?
2015ರ ಮೇ 15ರಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಆದೇಶದ ಪ್ರಕಾರ ಲೆಫ್ಟಿನೆಂಟ್ ಗವರ್ನರ್ ಅವರು ಸಾರ್ವಜನಿಕ ಆಡಳಿತ, ಸೇವೆಗಳು, ಪೊಲೀಸ್, ಜಮೀನು ಸಹಿತ ಎಲ್ಲ ವಿಚಾರಗಳ ಬಗ್ಗೆ ನಿರ್ಧಾರ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ ಎಂದು ಸೂಚಿಸಲಾಗಿತ್ತು. ಅದರ ವಿರುದ್ಧ ಆಪ್ ಸರಕಾರ ಕಾನೂನು ಹೋರಾಟ ನಡೆಸುತ್ತಾ ಬಂದಿತ್ತು.
ಕಾರ್ಯದರ್ಶಿ ಎತ್ತಂಗಡಿ
ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗು ತ್ತಲೇ ದಿಲ್ಲಿ ಸರಕಾರ ಸೇವೆಗಳ ವಿಭಾಗ ಕಾರ್ಯದರ್ಶಿ ಆಶೀಷ್ ಮೋರೆ ಅವರನ್ನು ಎತ್ತಂಗಡಿ ಮಾಡಿದೆ. ಅವರ ಸ್ಥಾನಕ್ಕೆ ದಿಲ್ಲಿ ಜಲಮಂಡಳಿ ಅಧ್ಯಕ್ಷ, 1995ನೇ ಬ್ಯಾಚ್ನ, ಎಜಿಎಂಯುಟಿ ಕೇಡರ್ನ ಐಎಎಸ್ ಅಧಿಕಾರಿ ಎ.ಕೆ.ಸಿಂಗ್ ಅವರನ್ನು ನೇಮಿಸಲಾಗಿದೆ.