ಹಾವೇರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕೃಷ್ಣ ಕೇಶಪ್ಪ ಆರೇರ ಅವರ ಕಚೇರಿ ಮತ್ತು ಮನೆ ಸೇರಿದಂತೆ ಏಕಕಾಲದಲ್ಲಿ ನಾಲ್ಕು ಕಡೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
ನಗರದ ಬಸವೇಶ್ವರ ನಗರ ಬಿ ಬ್ಲಾಕ್ನ 16ನೇ ಕ್ರಾಸ್ನಲ್ಲಿರುವ ಸ್ವಂತ ಮನೆ; ಹಾವೇರಿ ಎಪಿಎಂಸಿ ಕಚೇರಿ ಹಾಗೂ ಸ್ವಗ್ರಾಮ ಹಾನಗಲ್ ತಾಲ್ಲೂಕಿನ ಡೊಳ್ಳೇಶ್ವರದ ಸಹೋದರರ ಮನೆಗಳ ಮೇಲೆ ಒಟ್ಟು ನಾಲ್ಕು ಎಸಿಬಿ ತಂಡಗಳು ದಾಳಿ ನಡೆಸಿವೆ.
ಬಸವೇಶ್ವರ ನಗರದಲ್ಲಿರುವ ನಿವೇಶನ ಮತ್ತು ಮನೆ ಅಂದಾಜು ಒಂದೂವರೆ ಕೋಟಿ ಮೌಲ್ಯದ್ದಾಗಿದೆ. ಈ ಮನೆಯಲ್ಲಿ 476 ಗ್ರಾಂ ಚಿನ್ನಾಭರಣ, ಎರಡು ಮುಕ್ಕಾಲು ಕೆ.ಜಿ. ಬೆಳ್ಳಿ, ₹2.29 ಲಕ್ಷ ನಗದು ಸಿಕ್ಕಿದೆ. ಹಾವೇರಿ ನಗರದಲ್ಲಿ 1 ನಿವೇಶನ, ಸ್ವಗ್ರಾಮ ಡೊಳ್ಳೇಶ್ವರದಲ್ಲಿ 12 ಎಕರೆ ಹೊಲ ಮತ್ತು ತೋಟವನ್ನು ಕೃಷ್ಣ ಹೊಂದಿದ್ದಾರೆ. ಸ್ವಗ್ರಾಮದಲ್ಲಿರುವ ಸಹೋದರರ ಮನೆಗಳ ಮೇಲೂ ದಾಳಿ ನಡೆದಿದ್ದು, ₹6 ಲಕ್ಷ ನಗದು, 180 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
30 ಎಲ್ಐಸಿ ಪಾಲಿಸಿಗಳು ಪತ್ತೆಯಾಗಿದ್ದು, ಅವುಗಳ ಮೇಲೆ ಎಷ್ಟು ಹಣ ಹೂಡಿಕೆ ಮಾಡಿದ್ದಾರೆ ಹಾಗೂ ಕೃಷ್ಣ ಅವರ ಬ್ಯಾಂಕ್ ಖಾತೆಯ ವಿವರಗಳ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.