ಕೋಲಾರ : ಕೋಲಾರ ಜಿಲ್ಲೆಯ ಕೆಜಿಎಫ್ನ ಬಿಜಿಎಂಎಲ್ನ ಕೋಲಾರ ಗೋಲ್ಡ್ ಫೀಲ್ಡ್ಸ್ ಒಡೆತನದ ಬಳಕೆಯಾಗದ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಮುಂದಾಗಿದೆ. ಚಿನ್ನದ ಗಣಿಯು 12 ಸಾವಿರ ಎಕರೆ ವಿಶಾಲವಾದ ಪ್ರದೇಶದಲ್ಲಿದ್ದು, ಇಲ್ಲಿ ಇದುವರೆಗೂ ಬಳಸದ 3,200 ಎಕರೆ ಜಾಗದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಸ್ಥಳ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿ ಇರುವುದರಿಂದ ಕೇಂದ್ರದ ಸಮ್ಮತಿ ಅತ್ಯಗತ್ಯವಾಗಿದೆ.
ಶನಿವಾರ ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳೊಂದಿಗೆ ಬಿಜಿಎಂಎಲ್ ನ ಸ್ಥಳ ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ, ಕೋಲಾರ ಸಂಸದ ಎಸ್.
ಮುನಿಸ್ವಾಮಿ, ಶಾಸಕಿ ಎಂ. ರೂಪಕಲಾ, ಜಿಲ್ಲಾಧಿಕಾರಿ ಸಿ. ಸತ್ಯಭಾಮ, ಕೆಐಎಡಿಬಿ ಸಿಇಒ ಶಿವಶಂಕರ್ ಸೇರಿದಂತೆ ಹಲವರು ಇದ್ದರು. ಭಾರತ್ ಗೋಲ್ಡ್ ಮೈನ್ಸ್ನ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ಚೆನ್ನೈ ಬೆಂಗಳೂರು ಎಕ್ಸ್ಪ್ರೆಸ್ ಕಾರಿಡಾರ್ನ ಕೇಂದ್ರಭಾಗದಲ್ಲಿರುವ ಕೋಲಾರ ಜಿಲ್ಲೆಯ ಕೆಜಿಎಫ್ ಕೈಗಾರಿಕಾಭಿವೃದ್ದಿಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದರು. ಅಲ್ಲದೆ, ಬೆಂಗಳೂರು ಮತ್ತು ಹೊರವಲಯದಲ್ಲಿ ಕೈಗಾರಿಕಾ ಸ್ಥಾಪನೆಯಾದರೆ ನಗರದ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗಲಿದೆ. ಹಾಗಾಗಿ, ಬೆಂಗಳೂರು ಹೊರಭಾಗದ ಜಿಲ್ಲೆಯಲ್ಲಿ ವಲಯವಾರು ಅಭಿವೃದ್ಧಿ ಮಾಡಲಾಗುವುದು ಎಂದರು.
ಕೇಂದ್ರದ ಸರ್ವೇ ಕಾರ್ಯ ಮುಗಿದ ನಂತರ ಇಂಡಸ್ಟ್ರಿಯಲ್ ಯೋಜನೆ ರೂಪುರೇಷೆ ಸಿದ್ಧಪಡಿಸಲಾಗುವುದು. ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರ ಕೆಜಿಎಫ್ನಲ್ಲಿ ಕೈಗಾರಿಕಾ ಪಾರ್ಕ್ ಸ್ಥಾಪಿಸಲು ನಿರ್ಧರಿಸಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮನವಿ ನೀಡಲಾಗಿದೆ. ಆದರೆ, 3,200 ಎಕರೆಯ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಮಾಹಿತಿ ಪಡೆದುಕೊಳ್ಳಲು, 6 ತಿಂಗಳ ಒಳಗಾಗಿ ಸರ್ವೇ ಕಾರ್ಯ ನಡೆಸಿ ವರದಿ ನೀಡಲು ಸೂಚಿಸಲಾಗಿದ್ದು, ಬಳಿಕ ಭೂಮಿ ಹಸ್ತಾಂತರ ಮಾಡಲು ಸಾಧ್ಯ ಎಂದರು.
ಒಟ್ಟಿನಲ್ಲಿ ಭೂಮಿ ಹಸ್ತಾಂತರ ಪ್ರಕ್ರಿಯೆಗೆ ಕೇಂದ್ರ ಸರ್ಕಾರದ ಅನುಮತಿ ಬೇಕಿದೆ. ಅದರ ನಂತರವಷ್ಟೆ ಚಿನ್ನದಗಣಿ ಕೆಜಿಎಫ್ನಲ್ಲಿ ಕೈಗಾರಿಕಾ ವಲಯದ ಸ್ಥಾಪನೆಗೂ ಹಸಿರು ನಿಶಾನೆ ದೊರೆಯಲಿದೆ. ಇದು ಆಗಿದ್ದೇ ಆದಲ್ಲಿ, ಹಲವು ವರ್ಷಗಳಿಂದ ಕೆಲಸಕ್ಕಾಗಿ ಬೆಂಗಳೂರಿಗೆ ಅಲೆಯುತ್ತಿರುವ ಇಲ್ಲಿನ ಸಾವಿರಾರು ಜನರು, ಸ್ಥಳೀಯವಾಗಿ ಉದ್ಯೋಗ ಮಾಡಿಕೊಂಡು ಜೀವನ ನಡೆಸಲು ಸದವಕಾಶ ಸಿಕ್ಕಂತಾಗುತ್ತದೆ.