ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಧನಸಹಾಯವನ್ನೇ ನೆಚ್ಚಿಕೊಂಡಿದ್ದ ನಾಡಿನ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಈ ಬಾರಿ ಕನಿಷ್ಠ ಆರ್ಥಿಕ ನೆರವು ಸಹ ಕೈ ತಪ್ಪುವ ಆತಂಕ ಎದುರಾಗಿದೆ.
ಡಿಸೆಂಬರ್ ಅಂತ್ಯದೊಳಗೆ ಕನಿಷ್ಠ 3 ಕಾರ್ಯಕ್ರಮಗಳನ್ನು ನಡೆಸಿ, ದಾಖಲೆ ಗಳನ್ನು ಸೇವಾಸಿಂಧು ಪೋರ್ಟಲ್ನಲ್ಲಿ ಸಲ್ಲಿಸಬೇಕೆಂಬ ಇಲಾಖೆಯ ಸೂಚನೆಗೆ ಆಕ್ಷೇಪ ವ್ಯಕ್ತವಾಗಿದೆ.
ಧನಸಹಾಯಕ್ಕೆ ಸಂಬಂಧಿಸಿ ಪಾರದರ್ಶಕತೆಯ ಹೆಸರಿನಲ್ಲಿ ಇಲಾಖೆ ಹೊರಡಿಸಿದ್ದ ಮಾರ್ಗಸೂಚಿ ಸಂಘ-ಸಂಸ್ಥೆಗಳಿಗೆ ತಲೆನೋವಾಗಿದೆ. ಪ್ರತಿ ವರ್ಷ ಧನಸಹಾಯದ ಪಟ್ಟಿ ಬಿಡುಗಡೆಯಾದ ಬಳಿಕ ಆರ್ಥಿಕ ನೆರವಿನ ಅಸಮಾನತೆ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿದ್ದವು. ಈ ಬಾರಿ ಧನಸಹಾಯಕ್ಕೆ ವಿಧಿಸಿರುವ ನಿರ್ಬಂಧಗಳೇ ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.
ಧನಸಹಾಯಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ ಸಂಘ-ಸಂಸ್ಥೆಗಳಿಗೆ ಡಿಸೆಂಬರ್ ಅಂತ್ಯದ ಒಳಗೆ ಮೂರು ಕಾರ್ಯಕ್ರಮಗಳನ್ನು ಆಯೋಜಿಸಿ, ದಾಖಲೆಗಳನ್ನು ಸೇವಾಸಿಂಧು ಪೋರ್ಟಲ್ನಲ್ಲಿ ನಮೂದಿಸಬೇಕು ಎಂದು ಸೂಚಿಸಲಾಗುತ್ತಿದೆ. ಇದನ್ನು ಜಂಟಿ ನಿರ್ದೇಶಕರ ಅಧ್ಯಕ್ಷತೆಯ ಧನಸಹಾಯ ಶಿಫಾರಸು ಸಮಿತಿ ಪರಿಶೀಲಿಸಿ, ಶಿಫಾರಸು ಮಾಡಬೇಕಾಗುತ್ತದೆ. ಸ್ವಂತ ಹಣದಲ್ಲಿ ಕಾರ್ಯಕ್ರಮ ನಡೆಸಿ, ದಾಖಲೆ ಸಲ್ಲಿಸಿದವರಿಗೂ ಧನಸಹಾಯ ಸಿಗುವ ಖಾತ್ರಿ ಇಲ್ಲವಾಗಿದೆ.
ಧನಸಹಾಯಕ್ಕಾಗಿ ಸರ್ಕಾರವು ಪ್ರತಿವರ್ಷ ₹ 15 ಕೋಟಿಯಿಂದ ₹ 20 ಕೋಟಿ ಖರ್ಚು ಮಾಡುತ್ತಿದೆ. ರಾಜ್ಯದಲ್ಲಿ 7 ಸಾವಿರಕ್ಕೂ ಅಧಿಕ ಸಾಂಸ್ಕೃತಿಕ ಸಂಘ-ಸಂಸ್ಥೆಗಳಿದ್ದರೂ, ಅರ್ಜಿ ಅಲ್ಲಿಸುವ 4 ಸಾವಿರಕ್ಕೂ ಅಧಿಕ ಸಂಘ-ಸಂಸ್ಥೆಗಳಲ್ಲಿ 900ರಿಂದ 1,000 ಸಂಘ-ಸಂಸ್ಥೆಗಳಿಗೆ ಧನಸಹಾಯ ಒದಗಿಸಲಾಗುತ್ತಿದೆ.
ಹತ್ತಾರು ನಿರ್ಬಂಧ:ಈ ಹಿಂದೆ ಸಂಘ-ಸಂಸ್ಥೆಗಳ ಹಿಂದಿನ ಕಾರ್ಯಚಟುವಟಿಕೆಗಳನ್ನು ಪರಿ ಶೀಲಿಸಿ, ಧನಸಹಾಯಕ್ಕೆ ಆಯ್ಕೆ ಮಾಡಲಾಗುತ್ತಿತ್ತು.ಉತ್ತಮವಾಗಿ ಕಾರ್ಯಕ್ರಮ ಮಾಡಿದ ಕೆಲವರಿಗೆ ₹ 10 ಲಕ್ಷದವರೆಗೂ ಅನುದಾನ ಬರುತ್ತಿತ್ತು. ಈಗ ಆಯ್ಕೆಯಾದ ಸಂಘ-ಸಂಸ್ಥೆಯೊಂದಕ್ಕೆ ಅನುದಾನದ ಗರಿಷ್ಠ ಮಿತಿಯನ್ನೂ ₹ 2 ಲಕ್ಷಕ್ಕೆ ಸೀಮಿತಗೊಳಿಸಲಾಗಿದೆ. ಇಷ್ಟು ಹಣ ಪಡೆಯಲು ಹತ್ತಾರು ನಿರ್ಬಂಧಗಳನ್ನು ವಿಧಿಸಲಾಗಿದೆ.