ಧಾರವಾಡ, ನವೆಂಬರ್ 30: ಇವತ್ತು ಜಗತ್ತು ಡಿಜಿಟಲ್ ಮಯ ಆಗಿದೆ. ಎಲ್ಲವೂ ಈಗ ಕೈ ಬೆರಳಿನಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಅನಾದಿ ಕಾಲದಲ್ಲಿ ತಮ್ಮ ಪೂರ್ವಜರು, ಯಾವುದೇ ಕಾಗದವೂ ಇಲ್ಲದಂತಹ ಸಮಯದಲ್ಲಿ ತಾಳೆ ಗರಿಗಳನ್ನೇ ಬಳಸಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದರು.
ಆಗಿನ ಕಾಲಘಟ್ಟದ ಹಿರಿಯರು ನಮಗೆ ಬಿಟ್ಟು ಹೋಗಿರುವ ಅಮೂಲ್ಯವಾದ ಜ್ಞಾನ ಸಂಪತ್ತು ವರ್ಷಗಳುರುಳಿದಂತೆ ಹಾಳಾಗುತ್ತಿವೆ. ಹೀಗೆ ಹಾಳಾಗುತ್ತಿರುವ ತಾಳೆ ಗರಿಯಲ್ಲಿನ ಜ್ಞಾನಸಂಪತ್ತನ್ನು ಡಿಜಿಟಲೀಕರಣಗೊಳಿಸುವ ಕೆಲಸವೊಂದು ಸದ್ದಿಲ್ಲದೇ ನಡೆದಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ದೊಡ್ಡ ಅಭಿಯಾನವೇ ನಡೆಯುತ್ತಿದೆ.ಬಟ್ಟೆಯಲ್ಲಿ ಕಟ್ಟಿರುವ ಒಂದೊಂದೇ ಕಟ್ಟುಗಳನ್ನು ತುಂಬಾ ನಾಜೂಕಿನಿಂದ ಬಿಡಿಸಿ ಹೊರತೆಗೆಯುತ್ತಿರುವ ಸಿಬ್ಬಂದಿ, ಕಟ್ಟಿನಿಂದ ಒಂದೊಂದೇ ತಾಳೆ ಗರಿಯನ್ನು ಹೊರತೆಗೆದು,
ಅದನ್ನು ಸ್ವಚ್ಛಗೊಳಿಸುತ್ತಿರೋ ಸೇವಾ ಕಾರ್ಯಕರ್ತರು. ಇನ್ನೊಂದೆಡೆ ಆ ಗರಿಗಳನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಿಟ್ಟುಕೊಳ್ಳುತ್ತಿರುವ ಕೆಲಸ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿದೆ. ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ನಡೆಯುತ್ತಿರುವ ಕೆಲಸವಿದು.
ನೂರಾರು ವರ್ಷಗಳ ಹಳೆಯ ತಾಳೆಗರಿಗಳ ಡಿಜಿಟಲೀಕರಣ ಕಾರ್ಯ ಇಲ್ಲಿ ನಡೆಯುತ್ತಿದೆ. ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸುಮಾರು 75 ವರ್ಷಗಳ ಹಿಂದಿನಿಂದಲೇ ತಾಳೆಗರಿ ಮತ್ತು ಕೋರಿ ಕಾಗದದಲ್ಲಿ ಹಸ್ತಪ್ರತಿಗಳನ್ನು ಸಂರಕ್ಷಿಸುತ್ತಾ ಬರಲಾಗಿದೆ. ಸುಮಾರು 7000ಕ್ಕೂ ಹೆಚ್ಚು ಹಸ್ತ್ರಪತಿಗಳ ಗ್ರಂಥಗಳು ಇಲ್ಲಿವೆ. ಈ ಗ್ರಂಥಗಳಲ್ಲಿ 7 ಲಕ್ಷಕ್ಕೂ ಅಧಿಕ ತಾಳೆ ಗರಿಗಳಿವೆ. ಸದ್ಯ ಅವೆಲ್ಲವೂ ನಶಿಸಿ ಹೋಗುವ ಸ್ಥಿತಿಗೆ ಬಂದಿರುವ ಕಾರಣಕ್ಕೆ ಶಾಶ್ವತವಾಗಿ ಕಾಪಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದೇ ಕಾರಣಕ್ಕೆ ಇವೆಲ್ಲವುಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತಿದೆ.