ವೈದ್ಯಶಾಸ್ತ್ರ ಪರಿಣತಿ ಹೊಂದಿದವರಿಂದಲೇ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿಸಿಕೊಳ್ಳುತ್ತೇವೆ. ಅಡುಗೆ ಬಲ್ಲವರಿಂದಲೇ ಅಡುಗೆ ಮಾಡಿಸಿಕೊಳ್ಳುತ್ತೇವೆ. ಅದರಂತೆಯೇ ಧಾರ್ಮಿಕ ವಿಧಿ ವಿಧಾನಗಳನ್ನು ಬಲ್ಲವರ ಮುಖೇನವೇ ಮಾಡಿಸಬೇಕು. ಲೆಕ್ಕಪರಿಶೋಧನೆಯನ್ನು ಬೇರೆ ಯಾವುದೋ ಹುದ್ದೆಯವರು ಮಾಡಲು ಸಾಧ್ಯವಿಲ್ಲ.
ಲೆಕ್ಕಪರಿಶೋಧಕರೇ ಅದನ್ನು ನಿರ್ವಹಿಸಬೇಕು. ಹಾಗೆಯೇ ದೇವಸ್ಥಾನ/ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ವಹಣೆಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ನಡೆಸಬೇಕೇ ಹೊರತು ಸರಕಾರ ಅಲ್ಲ.
ಹಿಂದೂ ದೇವಸ್ಥಾನ, ಧಾರ್ಮಿಕ ಕೇಂದ್ರಗಳು ಸರಕಾರದ ಹಿಡಿತದಿಂದ ಹೊರಬರಬೇಕು ಎಂಬ ಆಂದೋಲನ ದಶಕಗಳಿಂದ ನಡೆಯುತ್ತಾ ಬಂದಿದೆ. ರಾಜ್ಯ ರಾಜ್ಯಗಳಲ್ಲಿ ಸರಕಾರಕ್ಕೆ ಪ್ರತ್ಯೇಕ ಮನವಿಗಳನ್ನು ನೀಡಲಾಗಿದೆ. ಹಲವು ರೀತಿಯಲ್ಲಿ ಕೋರಿಕೆಗಳು ಹೋಗಿವೆ. ಸರಕಾರದ ಅಧೀನದಲ್ಲಿದ್ದರೆ ಏನಾಗಬಹುದು ಎಂಬುದಕ್ಕೆ ಅನೇಕ ಘಟನೆಗಳು ಘಟಿಸಿದ್ದನ್ನು ಉಲ್ಲೇಖೀಸಲಾಗಿದೆ. ಸರಕಾರಗಳ ಅಧೀನದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಇದ್ದಾಗ ಸರಕಾರದಿಂದ ಅದಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಒದಗಿಸಲು ಎಂದಿಗೂ ಸಾಧ್ಯವೇ ಇಲ್ಲ. ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಮತ್ತು ಮಾಡಬೇಕಾದುದ್ದನ್ನು ಹೇಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಹಾಗೂ ನಂಬಿಕೆಗೆ ಧಕ್ಕೆಯಾಗದಂತೆ ನಿರ್ವಹಿಸಬೇಕು ಎಂಬುದು ಹಿಂದೂ ಧಾರ್ಮಿಕ ಕೇಂದ್ರಗಳು ಬಲ್ಲವು. ಧಾರ್ಮಿಕತೆಯ ವಿಚಾರದಲ್ಲಿ ಸ್ಪಷ್ಪತೆಯೂ ಇರುತ್ತದೆ. ಸರಕಾರದ ಹತೋಟಿ ಪೂರ್ಣವಾಗಿ ಇಲ್ಲ ಎನ್ನಲೂ ಆಗದು. ಪ್ರತ್ಯೇಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಹತೋಟಿ ಇರುತ್ತದೆ. ಪ್ರಜ್ಞಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಸ್ವತಂತ್ರವಾಗಿ ಅವರ ಮನೆಯಲ್ಲಿ ಅವರ ಇಚ್ಛೆಗೆ ಅನುಗುಣವಾಗಿ ಬದುಕಬಹುದು. ಧಾರ್ಮಿಕ ಆಚರಣೆಗಳನ್ನು ನಡೆಸಬಹುದು. ಹಾಗೆಂದ ಮಾತ್ರಕ್ಕೆ ಅವರ ಮೇಲೆ ಸರಕಾರದ ನಿಯಂತ್ರಣವೇ ಇಲ್ಲ ಎನ್ನಲಾಗದು. ಮತ್ತೂಬ್ಬರೊಂದಿಗೆ ಹೇಗಿರಬೇಕು? ಹೇಗೆ ವ್ಯವಹರಿಸಬೇಕು? ಇನ್ನೊಬ್ಬರಿಗೆ ತೊಂದರೆ ನೀಡಬಾರದು, ಮೋಸ, ಅನ್ಯಾಯ ಮಾಡಬಾರದು ಎಂಬಿತ್ಯಾದಿಗಳು ಇದ್ದೆ ಇರುತ್ತದೆ. ಇದೆಲ್ಲವನ್ನು ಮೀರಿ ದುರ್ಘಟನೆಗಳನ್ನು ನಡೆಸಿದಾಗ ಸರಕಾರದ ನಿಯಂತ್ರಣ ಬರುತ್ತದೆ.