ಧಾರವಾಡ, ಜೂನ್ 17: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ಸಹ ಬಿರುಸುಗೊಂಡಿವೆ. ಧಾರವಾಡದ ಕೃಷಿ ಇಲಾಖೆ ಅಕಾಲಿಕ ಮಳೆ ಮತ್ತು ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾದ ಅಥವಾ ನೀರು ನಿಂತ ಹೊಲದಲ್ಲಿ ಬೆಳೆಗಳ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳನ್ನು ನೀಡಿದೆ.
ಮೆಕ್ಕೆಜೋಳ, ಸೋಯಾಅವರೆ, ಹೆಸರು, ಶೇಂಗಾ, ಭತ್ತ ಮತ್ತು ಹತ್ತಿ ಬೆಳೆಗಳ ಬಿತ್ತನೆ ಕೈಗೊಂಡ ಹೊಲಗಳಲ್ಲಿ ಮುಂಜಾಗೃತ ಕ್ರಮವಾಗಿ ಇಳಿಜಾರಿಗೆ ಅಡ್ಡವಾಗಿ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ತಕ್ಷಣದ ಕ್ರಮವಾಗಿ ಹೆಚ್ಚಿನ ನೀರು ಬಸಿದು ಹೋಗಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ತಿಳಿಸಿದ್ದಾರೆ.
ಮಣ್ಣು ಹದ ಬಂದ ಕೂಡಲೇ ಬೆಳೆಗೆ ಅನುಸಾರವಾಗಿ ಸೂಕ್ತವಾದ ಕುಂಟೆಯಿಂದ ಅಂತರ ಬೇಸಾಯ ಮಾಡಿ ಕಳೆಗಳನ್ನು ನಿಯಂತ್ರಿಸಬೇಕು. ನೀರು ನಿಂತ ಸನ್ನಿವೇಶದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು. ಇದರಿಂದ ರೋಗಗಳ ಭಾಧೆ ತೀವ್ರವಾಗುವುದು. ಇಂತಹ ಸನ್ನಿವೇಶದಲ್ಲಿ ಬೆಳೆಗಳ ಬೆಳವಣಿಗೆ ಚೇತರಿಸಲು ಪ್ರತಿ ಲೀಟರ್ ನೀರಿಗೆ 2 ರಿಂದ 3 ಗ್ರಾಂ 17:44:00 ಅಥವಾ 13:00:45 ಅಥವಾ 19:19:19 ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.