ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು…ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ…ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ…
ಗಣೇಶ ವಿಸರ್ಜನೆಯಂದು ಮಹಾಪ್ರಸಾದ ವಿತರಣೆ ಹೊರೆಯಾಗದು…ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ…ಡಿಸಿ ವಿರುದ್ಧ ಪಾಲಿಕೆ ಸದಸ್ಯರು ಆರೋಪಗಳು ನಿರಾಧಾರ…ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ
ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಗಣೇಶ ಮಂಡಳಗಳ ಬೇಡಿಕೆಯ ಮೇರೆಗೆ ಗಣೇಶ ವಿಸರ್ಜನೆಯಂದು ಜಿಲ್ಲಾಡಳಿತದ ವತಿಯಿಂದ ಮಹಾಪ್ರಸಾದವನ್ನು ಆಯೋಜಿಸುವ ನಿರ್ಧಾರ ಕೈಗೊಂಡಿರುವುದು ಪ್ರಶಂಸನೀಯ. ಇದರಿಂದ ಯಾವುದೇ ಹೊರೆಯಾಗುವುದಿಲ್ಲ. ಇದನ್ನು ಮುಂದುವರೆಸಬೇಕೆಂದು ಬೆಳಗಾವಿ ಮಧ್ಯವರ್ತಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಹಾಮಂಡಳವು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಮನವಿಯನ್ನು ಸಲ್ಲಿಸಿದೆ.
ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಮತ್ತು ಪೊಲೀಸ್ ಆಯುಕ್ತ ಭೂಷಣ್ ಬೋರಸೆ ಅವರ ನೇತೃತ್ವದಲ್ಲಿ ಗಣೇಶೋತ್ಸವವನ್ನು ಯಶಸ್ವಿಗೊಳಿಸಲು ಕಳೆದ 2 ತಿಂಗಳಿನಿಂದ ಪೂರ್ವ ತಯಾರಿ ನಡೆಸಲಾಗುತ್ತಿದೆ. ಮುಂಬೈ ನಂತರ ಬೆಳಗಾವಿಯ ಗಣೇಶೋತ್ಸವವು ಪ್ರಸಿದ್ಧವಾಗಿದ್ದು,
ಉತ್ತರ ಕರ್ನಾಟಕ, ಗೋವಾ, ಕೊಂಕಣ ಮತ್ತು ಮಹಾರಾಷ್ಟ್ರದ ಅನೇಕ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ನಗರದ ಧರ್ಮವೀರ ಛತ್ರಪತಿ ಸಂಭಾಜಿ ಚೌಕ್ ಮತ್ತು ಬ್ಯಾರಿಸ್ಟರ್ ನಾಥ್ ಪೈ ಸರ್ಕಲ್, ಶಹಾಪುರ ಈ ಎರಡು ಸ್ಥಳಗಳಲ್ಲಿ ಅನ್ನದಾನ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರದ ಮೇಲೆ ಆರ್ಥಿಕವಾಗಿ ಹೆಚ್ಚಿನ ಹೊರೆ ಆಗುವುದಿಲ್ಲ ಎಂದು ಮಹಾಮಂಡಳ ಸ್ಪಷ್ಟಪಡಿಸಿದ್ದು, ಈ ಕುರಿತಾದ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದೆ.
ಮಹಾ ಪ್ರಸಾದ ಆಯೋಜನೆಗೆ ಸಂಬಂಧಿಸಿದಂತೆ, ಮಹಾನಗರ ಪಾಲಿಕೆಯಲ್ಲಿ ನಡೆದ ಸಭೆಯೊಂದರಲ್ಲಿ ಆಡಳಿತ ಪಕ್ಷದವರು ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿದ್ದಾರೆ. ಈ ಆರೋಪಗಳು ಉತ್ಸವದ ಯಶಸ್ವಿ ಆಯೋಜನೆಗೆ ಕಳೆದ ಎರಡು ತಿಂಗಳಿಂದ ಶ್ರಮಿಸುತ್ತಿರುವ ಅಧಿಕಾರಿಗಳ ಮನೋಬಲ ಕುಗ್ಗಿಸುವ ಪ್ರಯತ್ನವಾಗಿದೆ. ಉತ್ಸವದ ಯಶಸ್ಸಿಗೆ ಜಿಲ್ಲಾಡಳಿತದ ನಿರ್ಧಾರಗಳಿಗೆ ಮಹಾಮಂಡಳವು ಸಹಕಾರ ನೀಡಲಿದೆ ಎಂದರು.