ಬೆಳಗಾವಿ: ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗಾಗಿ ಜಿಲ್ಲೆಯ 2500ಕ್ಕೂ ಹೆಚ್ಚು ಕಾರ್ಯಕರ್ತರು “ಕನ್ನಡ ದೀಕ್ಷೆ” ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದಾರೆ. ರಾಜ್ಯದ 31 ಜಿಲ್ಲೆಗಳಲ್ಲಿ 50 ಸಾವಿರಕ್ಕೂ ಹೆಚ್ಚು ಯುವಕ, ಯುವತಿಯರಿಗೆ ಕನ್ನಡ ದೀಕ್ಷೆ ಕೊಡುವ ಕೆಲಸವನ್ನು ಕರ್ನಾಟಕ ರಕ್ಷಣಾ ವೇದಿಕೆ ಮಾಡಲಿದೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ತಿಳಿಸಿದರು.
ಕರವೇ ಕಾರ್ಯಕರ್ತರ ಮೆರವಣಿಗೆಗೆ ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು. ಬೆಳಗಾವಿ ವೀರರಾಣಿ ಚನ್ನಮ್ಮನ ಪುಣ್ಯಭೂಮಿ, ಸಂಗೊಳ್ಳಿ ರಾಯಣ್ಣನ ಕರ್ಮಭೂಮಿ, ಸಾಧು ಸಂತರ ಧರ್ಮಭೂಮಿಯಾಗಿದೆ. ಹಲವು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕನ್ನಡದ ಬಾವುಟ ಹಾರಿಸುವುದು ಕಷ್ಟವಾಗಿತ್ತು. ಕನ್ನಡ ಮಾತನಾಡಲು ಹೆದರಬೇಕಾಗಿತ್ತು. 25 ವರ್ಷಗಳ ಅವಧಿಯಲ್ಲಿ ಸಾವಿರಾರು ಕನ್ನಡ ಬಾವುಟ ಹಾರಾಡಲು ಕರವೇ ಸ್ವಾಭಿಮಾನಿ ಹುಲಿಗಳ ಹೋರಾಟದ ಕೊಡುಗೆಯೂ ಇದೆ. ಬೆಳಗಾವಿಯಿಂದ ಆರಂಭವಾದ ದೀಕ್ಷಾ ಕಾರ್ಯಕ್ರಮ 31 ಜಿಲ್ಲೆಗಳಿಗೂ ಹರಡಲಿದೆ ಎಂದರು.
ಈ ನೆಲದ ಯುವಕರಿಗೆ ಕನ್ನಡದ ಹೋರಾಟದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವಂತೆ ಕನ್ನಡದ ದೀಕ್ಷೆ ಕೊಡುವ ಕಾರ್ಯಕ್ರಮ ಇದಾಗಿದೆ. ಬೆಳಗಾವಿ ಬಳಿಕ ಬೀದರ್ನಲ್ಲಿ ಕಾರ್ಯಕ್ರಮ ನಡೆಯಲಿದೆ. ಕನ್ನಡ ನಾಡು, ನುಡಿ, ಗಡಿ, ಜಲ ರಕ್ಷಣೆಗೆ ಕಂಕಣಬದ್ಧರಾಗಿರುವ 78 ಲಕ್ಷದಷ್ಟು ಕಾರ್ಯಕರ್ತರಿದ್ದಾರೆ. ಸಂಘಟನೆಗೆ ಬರುವವರ ಸಂಖ್ಯೆ ಕಡಿಮೆಯಾಗಿಲ್ಲ. ಕರ್ನಾಟಕ ರಕ್ಷಣಾ ವೇದಿಕೆ ಮೇಲೆ ನಂಬಿಕೆ ಇದೆ. ಕನ್ನಡದ ನಾಡು, ನುಡಿ, ಜಲ, ನೆಲದ ವಿಚಾರದಲ್ಲಿ ಧಕ್ಕೆಯಾದರೆ ಅದಕ್ಕೆ ಸರಿಯಾದ ಉತ್ತರ ಕೊಡುವವರು ಕರವೇ ಕಾರ್ಯಕರ್ತರು ಮಾತ್ರ. ಈ ಭಾವನೆ ನಾಡಿನ 7 ಕೋಟಿ ಕನ್ನಡಿಗರಲ್ಲಿದೆ. ನಾಡಿನ ಹೋರಾಟದಲ್ಲಿ ಈ ನೆಲದ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದಕ್ಕಾಗಿ ಈ ದೀಕ್ಷಾ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂರ್ಖರು ಬೆಳಗಾವಿಯಲ್ಲಿದ್ದಾರೆ. ಎಂಇಎಸ್ ಜೀವ, ಹಲ್ಲಿಲ್ಲದ ಹಾವು ಇದ್ದಂತೆ, ಅವರ ಬೇರು ಈಗಾಗಲೇ ಒಣಗಿದೆ. ಕರಾಳ ದಿನದ ಪುಂಡಾಟ ನಡೆಯುವುದಿಲ್ಲ. ಬೆಳಗಾವಿ ರಣರಂಗವಾಗುವುದು ಬೇಡ. ಎಂಇಎಸ್ ಕರಾಳ ದಿನಾಚರಣೆ ರದ್ದು ಮಾಡಿದರೆ ಆ ಪರಿಸ್ಥಿತಿ ಉದ್ಭವಿಸುವುದಿಲ್ಲ. ರಾಜ್ಯೋತ್ಸವದ ವಿರುದ್ಧ ಕರಾಳ ದಿನ ಆಚರಿಸುವ ಮೂರ್ಖರನ್ನು ಬಂಧಿಸಿ ಗೂಂಡಾ ಕಾಯ್ದೆಯಡಿ ಜೈಲಿಗೆ ಹಾಕುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು.