ಮೈಸೂರು: ದಸರಾ ಜಂಬೂ ಸವಾರಿ ದಿನ ನಡೆಯುವ ಸಾಂಪ್ರದಾಯಿಕ ಕುಶಾಲತೋಪಿಗೆ ಗಜಪಡೆ ಹಾಗೂ ಅಶ್ವದಳವನ್ನು ಸಿದ್ಧಗೊಳಿಸುವ, ಸಿಡಿಮದ್ದು ಸಿಡಿಸುವ ಎರಡನೇ ಹಂತದ ತಾಲೀಮು ಇಂದು ನಡೆಯಿತು. ನಗರದ ವಸ್ತು ಪ್ರದರ್ಶನ ಆವರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿ ತಾಲೀಮು ನಡೆಸಿದರು.
ಅಭಿಮನ್ಯು ನೇತೃತ್ವದ 14 ಆನೆಗಳು ಹಾಗೂ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ 30 ಅಶ್ವಗಳು ಎರಡನೇ ಹಂತದ ಸಿಡಿಮದ್ದು ತಾಲೀಮಿನಲ್ಲಿ ಭಾಗವಹಿಸಿದವು.
ಸಿಡಿಮದ್ದು ತಾಲೀಮು ಏಕೆ?: ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ರಾಜವಂಶಸ್ಥರು ವಿಜಯದಶಮಿ ಆಚರಣೆಯ ಸಂದರ್ಭದಲ್ಲಿ ವಿಜಯದ ಸಂಕೇತವಾಗಿ ಯುದ್ಧಕ್ಕೆ ಬಳಸುವ ಫಿರಂಗಿಗಳಿಂದ ಗುಂಡನ್ನು ಆರಿಸಿ ವಿಜಯೋತ್ಸವ ಆಚರಿಸುತ್ತಿದ್ದರು. ಆ ಬಳಿಕ ಅರಮನೆಯಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜರೇ ಅಂಬಾರಿ ಮೇಲೆ ಕುಳಿತು ಜಂಬೂ ಸವಾರಿ ಮೆರವಣಿಗೆಗೆ ಹೊರಡುತ್ತಿದ್ದರು. ಆನಂತರ ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಬಂದ ನಂತರ ಸರ್ಕಾರ, ಚಾಮುಂಡೇಶ್ವರಿ ತಾಯಿಯನ್ನು ಚಿನ್ನದ ಅಂಬಾರಿಯಲ್ಲಿ ಕೂರಿಸಿ ಜಂಬೂ ಸವಾರಿ ಮೆರವಣಿಗೆ ನಡೆಸಲು ಆರಂಭಿಸಿತು.
ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ಆಸೀನಳಾಗಿರುವ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡಲಾಗುತ್ತದೆ. ಬಳಿಕ ರಾಷ್ಟ್ರಗೀತೆ ನುಡಿಸುವ 52 ಸೆಕೆಂಡ್ಗಳಲ್ಲಿ ಅರಮನೆಯ ಹೊರಭಾಗದಲ್ಲಿ ಫಿರಂಗಿಗಳಿಂದ 3 ಸುತ್ತು 21 ಬಾರಿ ಕುಶಾಲತೋಪುಗಳನ್ನು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಗುತ್ತದೆ. ಈ ವೇಳೆ, ಫಿರಂಗಿ ಮದ್ದುಗುಂಡಿನ ಶಬ್ದಕ್ಕೆ ಜಂಬೂ ಸವಾರಿಯ ಮೆರವಣಿಗೆಯಲ್ಲಿರುವ ಗಜಪಡೆ ಹಾಗೂ ಅಶ್ವದಳ ಬೆದರದೆ ಇರಲಿ ಎಂಬ ಕಾರಣಕ್ಕಾಗಿ ಸಿಡಿಮದ್ದು ತಾಲೀಮನ್ನು ನಡೆಸಲಾಗುತ್ತದೆ.