ಬೆಂಗಳೂರು: ಕೇಂದ್ರ ಸರ್ಕಾರ ಜಿಎಸ್ಟಿ ವ್ಯವಸ್ಥೆ ಜಾರಿಗೆ ತಂದು ಜನರಿಗೆ ಸಾಕಷ್ಟು ಹೊರೆ ಮಾಡಿದ್ದರು. ಬಡವರು, ಮಧ್ಯಮವರ್ಗದ ಮೇಲೆ ಹೊಡೆತ ಬಿದ್ದಿತ್ತು. ರಾಜ್ಯದಿಂದ 4.5 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹವಾಗಿ ಕೇಂದ್ರ ಸರ್ಕಾರಕ್ಕೆ ಹೋಗುತ್ತಿತ್ತು. ಅಲ್ಲಿಂದ ನಮಗೆ ತೀರಾ ಕಡಿಮೆ ವಾಪಸ್ ಬರುತ್ತಿತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಎಸ್ಟಿ ಸ್ತರ, ದರ ಇಳಿಕೆಯ ಬಳಿಕ ಕರ್ನಾಟಕಕ್ಕೆ 15 ಸಾವಿರ ಕೋಟಿ ಕೊರತೆಯಾಗುವುದು. ಇದನ್ನು ಕೇಂದ್ರ ಸರ್ಕಾರ ಕೊಡಬೇಕು. ನಮಗೆ ಅಲ್ಲ ಎಲ್ಲ ರಾಜ್ಯಗಳಿಗೂ ಕೊಡಬೇಕು. ರಾಜ್ಯ ಸರ್ಕಾರ ಕೊಡುವ 1 ರೂಪಾಯಿ ತೆರಿಗೆಯಲ್ಲಿ ಹಣದಲ್ಲಿ 12 ಪೈಸೆ ಮಾತ್ರ ಕೊಡುತ್ತಿದೆ ಎಂದು ಲೆಕ್ಕ ಹೇಳಿದರು.
ಜನರಿಗೆ ಅನುಕೂಲವಾಗಲಿದೆ: ಜಿಎಸ್ಟಿ ಇಳಿಕೆ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆಗೆ, ಕೇಂದ್ರ ಸರ್ಕಾರದ ಈ ನಿರ್ಧಾರ ಜನರಿಗೆ ಅನುಕೂಲ ಆಗುತ್ತದೆ. ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತೆ. ನಮ್ಮಿಂದ ಹೆಚ್ಚುವರಿ ಕಲೆಕ್ಟ್ ಮಾಡ್ತಿದ್ದಾರೆ. ಆದರೆ, ನಮಗೆ ಕೊಡೋದು ಅತ್ಯಲ್ಪ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನು, ರಾಜಣ್ಣ ಬಿಜೆಪಿಗೆ ಹೋಗುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಕಾಂಗ್ರೆಸ್ ಬಿಟ್ಟು ಎಲ್ಲೂ ಹೋಗಲ್ಲ. ಅವರು ಇಲ್ಲೇ ಇರ್ತಾರೆ. ನಾನು ಅವರ ಹುಟ್ಟುಹಬ್ಬಕ್ಕೆ ಹೋಗಿದ್ದೆ. ಅವರು 1972 ರಿಂದಲೂ ಕಾಂಗ್ರೆಸ್ನಲ್ಲಿದ್ದಾರೆ. ಅವರು ಎಲ್ಲೂ ಹೋಗಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.