ಜಾತ್ಯತೀತ” ಮತ್ತು “ಸಮಾಜವಾದ” ಮೌಲ್ಯಗಳು ಸಂವಿಧಾನದ ಪ್ರಾಣವಾಯು. ಈ ಪ್ರಾಣವಾಯು ಹೋದರೆ ಪ್ರಜಾಪ್ರಭುತ್ವದ ಉಸಿರು ನಿಲ್ಲುತ್ತದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಶ್ರೀ ಶಿವರಾತ್ರೀಶ್ವರ ಮಾಧ್ಯಮ ಪ್ರಶಸ್ತಿ ಪ್ರದಾನ ಮತ್ತ ವಿವಿಧ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಿಗೆ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಸಿವಿನ ಸೂಚ್ಯಂಕ, ಮಾನವ ಸ್ವಾತಂತ್ರ್ಯ ಸೂಚ್ಯಂಕ, ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿ ಎಲ್ಲಾ ಜಾಗತಿಕ ಸೂಚ್ಯಂಕಗಳಲ್ಲಿ ದೇಶದ ಸ್ಥಾನ ಮತ್ತು ಮಾನ ಕೆಳಗಿಳಿಯುತ್ತಿರುವ ಹೊತ್ತಿನಲ್ಲಿ ನಮ್ಮ ಸಂವಿಧಾನದಿಂದ “ಜಾತ್ಯತೀತ” ಮತ್ತು “ಸಮಾಜವಾದಿ” ಎನ್ನುವ ಮೌಲ್ಯಗಳನ್ನು ತೆಗೆದುಹಾಕಬೇಕು ಎನ್ನುವ ಒತ್ತಡ ಮತ್ತು ಚರ್ಚೆಗಳು ನಮ್ಮ ರಾಜ್ಯದಲ್ಲಿ ಆರಂಭವಾಗಿರುವುದು ಬೇಸರದ ಸಂಗತಿ.
ಮೊದಲಿಗೆ ಈ ಮೌಲ್ಯಗಳನ್ನು ಕೇವಲ “ಪದಗಳು” ಎಂದು ಕರೆದು ಆ ಮೂಲಕ ಸಂವಿಧಾನದ ಹೃದಯ ಮತ್ತು ಶ್ವಾಸಕೋಶವನ್ನೇ ತೆಗೆದುಹಾಕುವ ಹುನ್ನಾರ ಮುಂದುವರೆದಿದೆ. ಈ ಹುನ್ನಾರವನ್ನು ಸೋಲಿಸುವ ಶಕ್ತಿ ಜನತೆಗೆ ಇದೆ. ಆದರೆ ಮಾಧ್ಯಮಗಳು ಈ ಸಂದರ್ಭದಲ್ಲಿ ಜನರ ಜೊತೆ ನಿಲ್ಲವ ಮೂಲಕ ಬದ್ಧತೆ ತೋರಿಸಬೇಕಿದೆ ಎಂದು ಕರೆ ನೀಡಿದರು.
2024ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 127 ದೇಶಗಳ ಪೈಕಿ 105ನೇ ಸ್ಥಾನದಲ್ಲಿದೆ. ಜಾಗತಿಕ ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕದಲ್ಲಿ 180 ದೇಶಗಳ ಪೈಕಿ ಭಾರತ 151 ನೇ ಸ್ಥಾನದಲ್ಲಿದೆ. ಇವೆರಡೂ ಅತ್ಯಂತ ಗಂಭೀರವಾದ ಮತ್ತು ಆತಂಕಕಾರಿಯಾದ ಸ್ಥಿತಿ. ಇಂತಹ ಆತಂಕಕಾರಿಯಾದ ಸ್ಥಿತಿಯಲ್ಲಿ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಮರೆಯಬಾರದು ಎಂದು ನುಡಿದರು.