ಬೆಂಗಳೂರು: ಪ್ರಧಾನಿ ಇಂದಿರಾ ಗಾಂಧಿಯವರು 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದರು. ಕೇವಲ ತಮ್ಮ ಅಧಿಕಾರಕ್ಕಾಗಿ ನಮ್ಮ ಪವಿತ್ರ ಸಂವಿಧಾನವನ್ನೇ ಆಗ ಬಲಿ ಕೊಡಲಾಗಿತ್ತು ಎಂದು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.
“ಸಿಟಿಜನ್ ಫಾರ್ ಸೋಷಿಯಲ್ ಜಸ್ಟೀಸ್ ಬೆಂಗಳೂರು” ವತಿಯಿಂದ ಇಂದು ಟೌನ್ ಹಾಲ್ ನಲ್ಲಿ “1975ರ ತುರ್ತು ಪರಿಸ್ಥಿತಿ 50ನೇ ವರ್ಷ-ಕರಾಳ ದಿನಗಳು” ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದರು. ತಮ್ಮ ನಿರಂಕುಶ ಅಧಿಕಾರಕ್ಕಾಗಿ ಸ್ವಾತಂತ್ರ್ಯದ ಧ್ವನಿಗಳ ಕೊರಳನ್ನು ಹಿಸುಕಿ ಪತ್ರಿಕಾ ಸ್ವಾತಂತ್ರ್ಯ, ನ್ಯಾಯಾಂಗದ ಸ್ವಾಯತ್ತತೆ, ಸಾರ್ವಜನಿಕ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು ಎಂದು ತಿಳಿಸಿದರು.ಅಧಿಕಾರ ಲಾಲಸೆಯ ಹಿಟ್ಲರ್ಶಾಹಿ ದುರಾಡಳಿತವು ಇಂದಿಗೂ ಆಕ್ರೋಶದ ಕಿಚ್ಚು ಹಚ್ಚುವಂತಿದೆ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ವ್ಯವಸ್ಥೆಗಳನ್ನು ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಅಧಿಕಾರದಲ್ಲಿ ಉಳಿಯಬೇಕೆಂಬ ಒಂದೇ ಕಾರಣವು ತುರ್ತು ಪರಿಸ್ಥಿತಿ ಹೇರುವಿಕೆಯ ಹಿಂದೆ ಇತ್ತು ಎಂದು ಹೇಳಿದರು.