ಮೂಡಲಗಿ – ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.
ಶನಿವಾರದಂದು ಇಲ್ಲಿನ ಸಂಗಪ್ಪಣ್ಣ ವೃತ್ತದ ಬಳಿ ಪುರಸಭೆಯಿಂದ ನಿರ್ಮಿಸಲು ಉದ್ದೇಶಿಸಿರುವ
ಒಟ್ಟು ೭.೬೮ ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಮಳಿಗೆಗಳ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಸರ್ವತೋಮುಖ ಏಳ್ಗೆಯೇ ನನ್ನ ಗುರಿಯಾಗಿದೆ ಎಂದು ಹೇಳಿದರು.
ಮೂಡಲಗಿ ತಾಲ್ಲೂಕು ಕೇಂದ್ರಕ್ಕೆ ಹೊಸ ಸ್ವರೂಪ ನೀಡಲು ಬದ್ಧನಿದ್ದೇನೆ. ಈಗಗಲೇ ಸಾರ್ವಜನಿಕರಿಗೆ ಅಗತ್ಯವಿರುವ ಬಹುತೇಕ ಸರ್ಕಾರಿ ಕಚೇರಿಗಳನ್ನು ತರಲಾಗಿದೆ. ಇನ್ನೂ ಕೆಲವು ಸರ್ಕಾರದ ಬಳಿ ಪ್ರಸ್ತಾವಣೆಯಲ್ಲಿವೆ. ಅನುದಾನದ ತೊಂದರೆಯುಂಟಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಈಗಾಗಲೇ ಅಗತ್ಯವಿರುವ ಕಾಮಗಾರಿಗಳನ್ನು ಮಂಜೂರು ಮಾಡುವಂತೆ ಕೋರಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಮೂಡಲಗಿ ಜನತೆಗೆ ಅಚ್ಛಾ ದಿನ್ ಬರಲಿದೆ ಎಂದು ತಿಳಿಸಿದರು.
ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಲು ಎರಡು ಹೊಸ ವಾಣಿಜ್ಯ ಮಳಿಗೆಗಳು ತಲೆಯೆತ್ತಲಿವೆ. ಇದಕ್ಕಾಗಿ ಐಡಿಎಸ್ಎಂಟಿ ಯೋಜನೆಯಡಿ ಒಟ್ಟು ೭.೫೮ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಸಣ್ಣ ಪುಟ್ಟ ತರಕಾರಿ ವ್ಯಾಪಾರಿಗಳ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೂ ಪರ್ಯಾಯ ವ್ಯವಸ್ಥೆ ಮಾಡುವ ಇಂಗಿತ ವ್ಯಕ್ತಪಡಿಸಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ೪.೯೯ ಕೋಟಿ ರೂಪಾಯಿ ವೆಚ್ಚದ ಸಂಗಪ್ಪಣ್ಣ ವೃತ್ತದ ಗಣಪತಿ ಮಂದಿರದ ದಕ್ಷಿಣ ಭಾಗದಿಂದ ಬಿಎಸ್ಎನ್ಎಲ್ ಕಚೇರಿ ಮತ್ತು ೨.೫೯ ಕೋಟಿ ರೂಪಾಯಿ ವೆಚ್ಚದ ಗಣಪತಿ ಮಂದಿರದ ಉತ್ತರ ಭಾಗದಲ್ಲಿ ಹೊಸ ಮಳಿಗೆಗಳಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಶಿವಬೋಧರಂಗ ಮಠದ ಪೀಠಾಧಿಪತಿ ಅಮೃತಬೋಧ ಮಹಾಸ್ವಾಮಿಗಳು ಇದರ ಸಾನಿಧ್ಯ ವಹಿಸಿದ್ದರು.
ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ,
ಪುರಸಭೆ ಅಧ್ಯಕ್ಷೆ ಖುರ್ಷಾದಾ ನದಾಫ, ಉಪಾಧ್ಯಕ್ಷೆ ಭೀಮವ್ವ ಪೂಜೇರಿ, ಸದಸ್ಯರಾದ ಸಂತೋಷ ಸೋನವಾಲಕರ, ರವೀಂದ್ರ ಸಣ್ಣಕ್ಕಿ, ಹಣಮಂತ. ಗುಡ್ಲಮನಿ, ಜಯಾನಂದ ಪಾಟೀಲ, ಭೀಮಶಿ ಸಣ್ಣಕ್ಕಿ, ಆನಂದ ಟಪಾಲದಾರ, ಮುಖ್ಯಾಧಿಕಾರಿ ತುಕಾರಾಮ ಮಾದರ, ಗುತ್ತಿಗೆದಾರ ಗಜಾನನ ವಶೇದಾರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.