ಮಂಡ್ಯ : ಡಿಕೆಶಿ ಏನಿದ್ರು ಸಿಎಂ ಆಗುವ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್ನಲ್ಲಿ ಯಾರು ಬಿಟ್ಟು ಕೊಡ್ತಾರೆ? ಎಂದು ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾಂಡ್ ನಿರ್ಮಾಣದ ಗುದ್ದಲಿ ಪೂಜೆಯನ್ನು ಅವರು ಭಾನುವಾರ ನೆರವೇರಿಸಿದರು. ಹಲವು ವರ್ಷಗಳಿಂದ ಆಟೋ ಸ್ಟಾಂಡ್ಗೆ ಬೇಡಿಕೆ ಇತ್ತು. ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. CSR ಅನುದಾನದಲ್ಲಿ ಗುದ್ದಲಿ ಪೂಜೆ ಕಾಮಗಾರಿಗೆ ಚಾಲನೆ ನೀಡಿದರು.
ನಂತರ 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಡಿಕೆಶಿ ಸಿಎಂ ಆಗುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಕೈಯಲ್ಲಿ ಏನೂ ಇಲ್ಲ, ಎಲ್ಲಾ ಭಗವಂತನ ಕೈಯಲ್ಲಿ ಇರೋದು ಎಂದು ಹೇಳಿದ್ದಾರೆ.
ಬಸ್ ನಿಲ್ದಾಣದ ಮುಂಭಾಗ ಆಟೋ ಸ್ಟ್ಯಾಂಡ್ಗೆ ಚಾಲನೆ ನೀಡಿದ್ದೇನೆ. ಚಾಲಕರಿಗೆ ನೀವೇ ಗುದ್ದಲಿ ಪೂಜೆ ಮಾಡಿ ಎಂದಿದ್ದೆ. ದೊಡ್ಡ ಯೋಜನೆಗೆ ಚಾಲನೆ ಕೊಟ್ಟಾಗಲೂ ನಾನು ಪ್ರಚಾರಕ್ಕೆ ಎಂದು ಕೈ ಹಾಕಲಿಲ್ಲ. ಅದು ನನ್ನ ಜಾಯಮಾನವೂ ಅಲ್ಲ. ಪ್ರತಿ ಪಂಚಾಯತಿ ಮಟ್ಟದಲ್ಲಿ ಸುಸಜ್ಜಿತ ಆಸ್ಪತ್ರೆ, ಶಾಲೆ ಮಾಡಬೇಕು ಎಂಬುದು ಕನಸಿದೆ ಎಂದರು.
ಮೊದಲ ಹಂತವಾಗಿ ₹8 ಕೋಟಿ ಯೋಜನೆಯಲ್ಲಿ ಶಾಲೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗಿದೆ. 100 ಬಸ್ ಸೆಲ್ಟರ್ ನಿರ್ಮಾಣಕ್ಕೆ ಪ್ಲಾನ್ ಮಾಡಿದ್ದೇವೆ. ಜಿಲ್ಲೆಯ ವಿಕಲಚೇತನರಿಗಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ರೂಪಿಸಿದ್ದೇನೆ. ಕಾರ್ಖಾನೆಯನ್ನು ತರಬೇಕು ಎಂಬುದು ಮಂಡ್ಯ ಜಿಲ್ಲೆಯ ಜನರ ನಿರೀಕ್ಷೆಯಾಗಿದೆ. ರಾಜ್ಯ ಸರ್ಕಾರದ ಸಹಕಾರ ಕೊಟ್ಟು ಪ್ರೋತ್ಸಾಹ ಮಾಡಿದ್ರೆ ಅದನ್ನ ಮಾಡಬಹುದು. ಆದ್ರೂ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ನಾನು ಪ್ರಯತ್ನ ಮಾಡ್ತಿದ್ದೇನೆ. ಟೀಕೆಗಳಿಗಿಂತ ಹೆಚ್ಚಾಗಿ ನನ್ನ ಡ್ಯೂಟಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ರಾಜ್ಯ ಸರ್ಕಾರದ ಸಹಕಾರದ ಬಗ್ಗೆ ಈಗ ಚರ್ಚೆ ಮಾಡಲ್ಲ ಎಂದು ಹೇಳಿದರು.