ಕೊಪ್ಪಳ, ಮೇ 28: ಥೈಲ್ಯಾಂಡ್ನಿಂದ (Thailand) ಅಕ್ರಮವಾಗಿ ಗಾಂಜಾ (ganja) ತಂದು ಮಾರಾಟ ಮಾಡುತ್ತಿದ್ದ 8 ಜನರನ್ನು ಬಂಧಿಸಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲೆಯ ಗಂಗಾವತಿ ಪೊಲೀಸರಿಂದ ಸೌಜೇಶ್, ಸಲೀಂ, ಬಿ.ದುರ್ಗಾ, ಬಾದ್ ಷಾ, ಮದನ್, ಸೂರ್ಯ ಪ್ರತಾಪ್ ರೆಡ್ಡಿ, ಅಮೀದ್ ಮತ್ತು ಮಣಿಕಂಠ ಅನ್ನು ಬಂಧಿಸಿದ್ದು, ಇದರಲ್ಲಿ ಮೂವರು ಕೇರಳದವರು. 18 ಲಕ್ಷ ಮೌಲ್ಯದ 1806 ಗ್ರಾಂ ಹೈಡ್ರೋ ಗಾಂಜಾ ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಿಷ್ಟು
ಈ ಬಗ್ಗೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿಕೆ ನೀಡಿದ್ದು, ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪಾರ್ಟಿಗಾಗಿ ಥೈಲ್ಯಾಂಡ್ನಿಂದ ಗಂಗಾವತಿಗೆ ಸಲೀಂ ಎರಡು ಕಾರ್ಗಳಲ್ಲಿ ಅಕ್ರಮವಾಗಿ ಗಾಂಜಾ ತಂದಿದ್ದ. ಗಂಗಾವತಿ ನಗರದ ಸರ್ಕಾರಿ ಐಟಿಐ ಕಾಲೇಜ್ ಬಳಿ ಹೈಡ್ರೋ ಗಾಂಜಾ ಪತ್ತೆ ಆಗಿದೆ ಎಂದಿದ್ದಾರೆ.ಎಂಟು ಜನರ ಪೈಕಿ ಸೌಜೇಶ್, ಸಲೀಂ ಹಾಗೂ ಬಾದ್ ಷಾ ಕೇರಳದ ಮೂಲದವರು. ಮದನ್ ಬಿಇ ಓದಿದ್ದು, ದುರ್ಗಾ ಪ್ರಸಾದ್ ಬಿಕಾಂ ಓದಿದ್ದಾನೆ. ಕಳೆದ ಕೆಲ ದಿನಗಳ ಹಿಂದೆ ನಡೆದ ಅತ್ಯಾಚಾರ ಪ್ರಕರಣಕ್ಕೂ ಗಾಂಜಾ ಪ್ರಕರಣಕ್ಕೂ ಲಿಂಕ್ ಇಲ್ಲ. ಗಂಗಾವತಿಗೆ ಏಕೆ ಬಂದರೂ, ಇಲ್ಲಿಂದ ಎಲ್ಲಿ ಹೋಗುತ್ತಿದ್ದರು ಎಂಬ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಹೇಳಿದ್ದಾರೆ