ಶಿವನ ದರ್ಶನ ಸಿಗದಿದ್ದಕ್ಕೆ ಮಗಳಿಗೆ ಬೇಸರ: ಮಗಳ ಆಸೆ ಈಡೇರಿಸಲು ತಂದೆ ನಿರ್ಮಿಸಿದ ಮೂರ್ತಿ ಇಂದು 7 ನೇ ಅತಿದೊಡ್ಡ ಶಿವನ ಮೂರ್ತಿ
ಆ ಮೂರ್ತಿ ದೇಶದಲ್ಲೇ 7 ನೇ ಸ್ಥಾನ ಪಡೆದ ಬೃಹತ್ ಮೂರ್ತಿ. ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಲ್ಪಡುವ ಮೂರ್ತಿ. ಆ ಮೂರ್ತಿಯನ್ನು ಆರಾಧಿಸಲು ಲಕ್ಷಾಂತರ ಭಕ್ತರ ಸಮಾಗಮವಾಗುತ್ತದೆ. ಸಾವಿರಾರು ಭಕ್ತರು ಪ್ರತಿನಿತ್ಯ ಇಲ್ಲಿಗೆ ಭೇಟಿ ಕೊಡುತ್ತಾರೆ. ಇನ್ನೂ ಆ ಮೂರ್ತಿ ಜೊತೆಯಲ್ಲಿ ಇಲ್ಲಿ ಹಲವು ದೇವರುಗಳಿವೆ. ಶರಣ ಶರಣೆಯರ ಮೂರ್ತಿಗಳಿವೆ. ಇಂತಹ ಬೃಹತ್ ಮೂರ್ತಿ ನಿರ್ಮಿಸಲು ಕಾರಣವಾಗಿದ್ದು ಅಪ್ಪ ಮಗಳ ಪ್ರೀತಿ. ಆ ಮೂರ್ತಿಯಾದ್ರೂ ಯಾವದು? ಆ ಕಾರಣ ಯಾವುದು? ಆ ಅಪ್ಪ ಮಗಳು ಯಾರು? ಎನ್ನೋ ಕುರಿತು ಇಲ್ಲಿದೆ ಡಿಟೇಲ್ಸ್
ತಂದೆ ತನ್ನ ಮಗಳ ಆಸೆ ಈಡೇರಿಸಲು ಏನೆಲ್ಲಾ ಮಾಡುತ್ತಾರೆ. ಮಗಳ ಪಾಲಿಗೆ ತಂದೆ ಯಾವಾಗಲೂ ರಿಯಲ್ ಹೀರೋ. ಅಂತಹ ರಿಯಲ್ ಕಥೆಯನ್ನು ನಾವು ಇವತ್ತು ಹೇಳಲು ಹೊರಟಿರುವದು. ವಿಜಯಪುರ ನಗರ ಎಂದಾಕ್ಷಣ ನೆನಪಿಗೆ ಬರುವದು ಐತಿಹಾಸಿಕ ಸ್ಮಾರಕಗಳು ಅದರ ಜೊತೆಯಲ್ಲಿ ಪ್ರವಾಸಿ ತಾಣಗಳು. ವಿಶ್ವವಿಖ್ಯಾತ ಗೋಲ್ ಗುಂಬಜ್, ಬಾರಾ ಕಮಾನ್, ಇಬ್ರಾಹಿಂ ರೋಜಾ ಅಂತಹ ಸ್ಮಾರಕಗಳ ಜೊತೆಗೆ ಈ ಶಿವನ ಮೂರ್ತಿಯೂ ವಿಜಯಪುರ ಪ್ರವಾಸೋದ್ಯಮಕ್ಕೆ ಗರಿಸಿಕ್ಕಿಸಿದಂತಿದೆ.
ವಿಜಯಪುರ ನಗರದಿಂದ ಮೂರು ಕಿ.ಮೀ ದೂರದಲ್ಲಿ ಸಿಂದಗಿ ರಸ್ತೆಯ ಹತ್ತಿರ ಸುಮಾರು 06 ಎಕರೆ ವಿಸ್ತೀರ್ಣದ ಹಸಿರುವನದ ಮಧ್ಯೆ ಮಂದಸ್ಮಿತವಾಗಿ ಕುಳಿತಿರುವ ಶಿವನ ಮೂರ್ತಿ ನಿಮಗೆ ಕಾಣಸಿಗುತ್ತದೆ. ಶಿವಗಿರಿಯಲ್ಲಿರುವ ಶಿವನ ಮೂರ್ತಿ ಆಕರ್ಷಿಣೀಯ ಸ್ಥಳಗಳಲ್ಲಿ ಒಂದು. ದೇಶದಲ್ಲೇ ವಿಸ್ತಾರ ಹಾಗೂ ಎತ್ತರದ ಎಳನೇಯ ಶಿವನ ಮೂರ್ತಿ ಇದಾಗಿದೆ. ಒಟ್ಟು 85 ಅಡಿ ಉದ್ದವಿರುವ ಈ ಮೂರ್ತಿಯನ್ನು ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಸಂತಕುಮಾರ ಪಾಟೀಲ ಹಾಗೂ ಅವರ ಕುಟುಂಬದವರು ನಿರ್ಮಿಸಿದ್ದಾರೆ.
ಇದನ್ನು ಸಂಪೂರ್ಣವಾಗಿ ಸಿಮೆಂಟ್, ಸ್ಟೀಲ್ ಹಾಗೂ ಕಾಂಕ್ರೀಟ್ ನಿಂದ ನಿರ್ಮಿಸಲಾಗಿದೆ. ಈ ದೈತ್ಯ ಶಿವನ ಮೂರ್ತಿಯು ಅಂದಾಜು 1500 ಟನ್ ತೂಕವನ್ನು ಹೊಂದಿದೆ. ಶಿವನು ಧರಿಸಿದ ಪ್ರತಿಯೊಂದು ರುದ್ರಾಕ್ಷಿಯು 50 ಕೆ.ಜಿ. ತೂಕವನ್ನು ಹೊಂದಿದ್ದು, 1.5 ಅಡಿ ವ್ಯಾಸವುಳ್ಳವಾಗಿದೆ. ಶಿವನ ಕೊರಳಲ್ಲಿ ಆಸೀನವಾದ ಸರ್ಪವು 145 ಅಡಿ ಉದ್ದವಿದೆ. ಈ ಶಿವನ ಮೂರ್ತಿಯು 2006ರಲ್ಲಿ ಪ್ರತಿಷ್ಠಾಪನೆಗೊಂಡಿತು. ಬಸಂತಕುಮಾರ ಪಾಟೀಲ, ಚಿತ್ರ ನಿರ್ಮಾಪಕರು, ಶಿವಗಿರಿ ಮೂರ್ತಿ ನಿರ್ಮಿಸಿದವರು.
ಇನ್ನೂ ಇಷ್ಟು ದೊಡ್ಡ ಪ್ರಮಾಣದ ಮೂರ್ತಿ ನಿರ್ಮಾಣಗೊಳ್ಳುವದರ ಹಿಂದೆ ಒಂದು ಸುಂದರ ಕಥೆಯಿದೆ. ಅದು ಅಪ್ಪ ಮಗಳ ಪ್ರೀತಿ. ಬಸಂತಕುಮಾರ ಪಾಟೀಲ ಇವರ ಮಗಳು ಅಮೃತಾ ಬೆಂಗಳೂರಿನಲ್ಲಿ ವಾಸವಿದ್ದಾಗ ಶಿವರಾತ್ರಿ ಸಮಯದಲ್ಲಿ ಕೇಪು ಶಿವನ ದರ್ಶನ ಪಡೆಯಲು ಹೋಗಿರುತ್ತಾರೆ. ಆಗ ಲಕ್ಷಾಂತರ ಭಕ್ತರು ಇದ್ದ ಕಾರಣ ಅವರಿಗೆ ಶಿವನ ದರ್ಶನ ಸಿಗದೇ ಹೋದಾಗ ಮಗಳು ಅಮೃತಾ ಬೇಸರಿಸಿಕೊಳ್ಳುತ್ತಾಳೆ.
ಆಗ ಬಸಂತಕುಮಾರ ಪಾಟೀಲ ಇವರಿಗೆ ಅಪ್ಪ ನಿಮ್ಮ ಊರಲ್ಲಿ ಏಕೆ ನೀವು ಶಿವನ ಮೂರ್ತಿ ನಿರ್ಮಿಸಬಾರದು ಎಂಬ ಪ್ರಶ್ನೆ ಬಸಂತಕುಮಾರ ಪಾಟೀಲ ರಲ್ಲಿ ಮೂರ್ತಿ ಚಿಂತನೆಗೆ ಅಡಿಪಾಯ ಹಾಕುತ್ತದೆ. ಮೊದಲೇ ವಿಜಯಪುರ ಜಿಲ್ಲೆಗೆ ಏನಾದರೂ ಒಂದು ಕೊಡುಗೆ ಕೊಡುವ ಯೋಚನೆಯಲ್ಲಿದ್ದ ಬಸಂತಕುಮಾರ ಪಾಟೀಲರಿಗೆ ಮಗಳ ಈ ಬೇಡಿಕೆ ಸೂಕ್ತವೆನಿಸಿ ಶಿವಗಿರಿ ನಿರ್ಮಾಣಕ್ಕೆ ಕೈ ಹಾಕುತ್ತಾರೆ. ಮಗಳು ಅಮೃತಾ ಬೇಡಿಕೆ, ಕನಸು ಆಸೆ ಈಡೇರಿಸಲು ಮಾಡಿದ ಸಾಹಸವೇ ಇಂದು ದೇಶದ 7 ನೇ ಅತಿದೊಡ್ಡ ಶಿವನ ಮೂರ್ತಿ ನಿರ್ಮಾಣವಾಗಲು ಕಾರಣವಾಯಿತು.
ಇದೀಗ ಶಿವನ ಸನ್ನಿಧಿಯಲ್ಲಿ ಬಲಮುರಿ ಗಣೇಶ, ನವಗ್ರಹ, ರಾಮ, ರಾಮಭಕ್ತ ಹನುಮಂತ, ನಂದಿ, ಅನ್ನಪೂರ್ಣೆ, ವಿಶ್ವಗುರು ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಜೊತೆಗೆ ಹಲವು ಶರಣ ಶರಣೆಯರ ಮೂರ್ತಿಗಳು ಹಚ್ಚ ಹಸುರಿನ ಪ್ರದೇಶದಲ್ಲಿ ಕಂಗೊಳಿಸ್ತಿವೆ. ಇನ್ನೂ ಇಲ್ಲಿಯ ಶಿವನ ಆರಾಧಿಸುವವರಿಗೆ ನೆಮ್ಮದಿ, ಸಂತೋಷ ದೊರೆತಿದೆ. ಹೀಗಾಗಿ ಭಕ್ತರ ಸಂಖ್ಯೆಯೂ ಇಲ್ಲಿ ಜಾಸ್ತಿ ಇದೆ.
ಒಟ್ನಲ್ಲಿ ಮಗಳ ಆಸೆ ಈಡೇರಿಸಲು ತಂದೆ ನಿರ್ಮಿಸಿದ ದೇವರ ಪ್ರತಿಮೆ ಇಂದು ವಿಶ್ವ ವಿಖ್ಯಾತಿ ಗಳಿಸಿದೆ. ಅಪ್ಪ ಮಗಳ ಪ್ರೀತಿಯ ಧ್ಯೋತಕವಾಗಿರುವ ಶಿವಗಿರಿ ಇಂದು ವಿಜಯಪುರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಗರಿ ಮೂಡಿಸಿದೆ.