ಬೆಳಗಾವಿ: ನಗರದ ಹೊರ ವಲಯದ ಕಣಬರ್ಗಿಯಲ್ಲಿ ಒಂದೂವರೆ ವರ್ಷದಿಂದ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ವಿಳಂಬಕ್ಕೆ ಸ್ಥಳೀಯ ನಿವಾಸಿಗಳು ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಕಣಬರ್ಗಿ ಬಸ್ ನಿಲ್ದಾಣದಿಂದ ಶ್ರೀ ಸಿದ್ದೇಶ್ವರ ದೇವಸ್ಥಾನದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಆದರೆ ರಸ್ತೆ ನಿರ್ಮಾಣ ಕೊನೆಯ ಹಂತಕ್ಕೆ ತಲುಪಿದ್ದರೂ ಮುಗಿಸಲು ಗುತ್ತಿಗೆದಾರರು ಹಿಂದೇಟು ಹಾಕುತ್ತಿದ್ದಾರೆ. ಕಾಮಗಾರಿ ಅರ್ಧಕ್ಕೆ ನಿಂತಿದ್ದರಿಂದ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಕಣಬರ್ಗಿಯ ಪ್ರಮುಖ ಮಾರ್ಗವಾಗಿರುವ ಈ ರಸ್ತೆ ನಿರ್ಮಾಣ ವಿಳಂಬದಿಂದ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಈ ಮಾರ್ಗದಲ್ಲಿ ಹೆಚ್ಚಿನ ಜನದಟ್ಟಣೆ ಇರುತ್ತದೆ. ರಸ್ತೆ ಮೇಲೆ ಕಲ್ಲು, ಮಣ್ಣು ಬಿದ್ದಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ. ವಾಹನ ದಟ್ಟಣೆಯಿಂದಾಗಿ ಜನರಿ ತೊಂದರೆ ಅನುಭವಿಸುತ್ತಿದ್ದಾರೆ.
ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ನೀರು ತಗ್ಗುಗಳಲ್ಲಿ ನಿಂತಿದೆ. ಕೆಲಸ ಅರ್ಧಕ್ಕೆ ನಿಂತಿದ್ದರಿಂದ ಮಳೆ ನೀರು ಅಂಗಡಿಗಳ ಎದುರು ನಿಂತು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಮಳೆ ನೀರಿನಿಂದ ರಸ್ತೆ ಪಕ್ಕದ ಮಣ್ಣುಗಳಿಂದ ರಾಡಿ ಆಗಿದೆ. ಎರಡು ದಿನಗಳಿಂದ ಜನರು ತಿರುಗಾಡುವುದೂ ಕಷ್ಟಕರವಾಗಿದೆ.