ಬಾಗಲಕೋಟೆ: ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಿಂದ ಬಸವನಾಡು ಎಂಬ ಖ್ಯಾತಿ ಪಡೆದರೆ, ಆಲಮಟ್ಟಿ ಜಲಾಶಯದಿಂದ ಆವರಿಸಿದ ಹಿನ್ನೀರಿನಿಂದ ಮುಳುಗಡೆಗೊಂಡು ಮುಳುಗಡೆ ಜಿಲ್ಲೆ ಎಂಬ ಹಣೆಪಟ್ಟಿಯೂ ಈ ಜಿಲ್ಲೆ ಕಟ್ಟಿಕೊಂಡಿದೆ. ಇದೆಲ್ಲದರ ನಡುವೆ ರಾಜಕೀಯ ಕ್ಷೇತ್ರದಲ್ಲಿ ಸದಾ ಗಮನ ಸೆಳೆಯುವ ವೈಶಿಷ್ಟ್ಯತೆ ಮೆರೆದಿದೆ.
ಅದಕ್ಕೆ ಕಾರಣ ಹಲವು.
ನಾಡಿನ ಮುಖ್ಯಮಂತ್ರಿ, ದೇಶಕ್ಕೆ ರಾಷ್ಟ್ರಪತಿ (ಹಂಗಾಮಿ)ಯಾಗಿದ್ದ ಬಿ.ಡಿ. ಜತ್ತಿ ಅವರನ್ನು ಜಮಖಂಡಿ ಕ್ಷೇತ್ರ ನೀಡಿದ್ದರೆ; ರಾಜಕೀಯ ಲೆಕ್ಕಾಚಾರದ ಲಾಭ-ನಷ್ಟಗಳ ಮಧ್ಯೆಯೇ ಹುನಗುಂದ ಕ್ಷೇತ್ರದ ಎಸ್.ಆರ್. ಕಂಠಿ ಅವರಿಗೂ ನಾಡಿನ ಸಿಎಂ ಆಗುವ ಯೋಗ ಒಲಿದು ಬಂದಿತ್ತು. ರಾಮಕೃಷ್ಣ ಹೆಗಡೆ ಅವರನ್ನು ಸಿಎಂ ಆಗಿದ್ದಾಗಲೇ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ, ಬ್ಯಾರೇಜ್ ಹೀರೋಗೆ ಜಯಕಾರ ಹಾಕಿದ ಈ ಬಸವನಾಡು, ಕಷ್ಟದಲ್ಲಿ ಬಂದಿದ್ದ ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುರ್ನಜನ್ಮ ನೀಡಿದ ಪರೋಪಕಾರಿ ಜಿಲ್ಲೆಯೂ ಹೌದು.
1983ರವರೆಗೂ ಜಿಲ್ಲೆಯ ಏಳೂ ಕ್ಷೇತ್ರಗಳು ಕಾಂಗ್ರೆಸ್ನ ಭದ್ರನೆಲೆ. ಬಳಿಕ ಅಲ್ಲಲ್ಲಿ ಜೆಎನ್ಪಿ (ಜನತಾ ಪಾರ್ಟಿ) ಹಿಡಿತ ಸಾಧಿಸಲು ಹವಣಿಸಿತು. 1983 ಮತ್ತು 1985ರ ವಿಧಾನಸಭೆ ಚುನಾವಣೆಗಳಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ, ಐದರಲ್ಲಿ ಜೆಎನ್ಪಿ ಗೆದ್ದಿತ್ತು. ಕ್ರಮೇಣ ಬಿಜೆಪಿಯತ್ತ ವಾಲಿದ ಮತದಾರರು, 2004ರ ಹೊತ್ತಿಗೆ ಕೇಸರಿ ಪಕ್ಷ ಸಂಪೂರ್ಣ ಅರಳಲು ಕಾರಣರಾದರು. ಜಿಲ್ಲೆಯ ಮೊದಲ ಬಿಜೆಪಿ ಶಾಸಕ ಎಂಬ ಖ್ಯಾತಿ ಗುಳೇದಗುಡ್ಡದಿಂದ 1983ರಲ್ಲಿ ಆಯ್ಕೆಯಾಗಿದ್ದ ಮಲ್ಲಿಕಾರ್ಜುನ ಬನ್ನಿ ಅವರದ್ದು. ಲಿಂಗಾಯಿತರೇ ಪ್ರಬಲರಾಗಿರುವ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ, ಮುಧೋಳ ಮೀಸಲು ಕ್ಷೇತ್ರವಾಗಿದೆ. 2008ರಲ್ಲಿ ನಡೆದ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಗುಳೇದಗುಡ್ಡ ಕ್ಷೇತ್ರ ಮಾಯವಾಗಿ, ತೇರದಾಳ ಅಸ್ತಿತ್ವಕ್ಕೆ ಬಂದಿದೆ. ಸ್ವಾತಂತ್ರ್ಯ ಬಳಿಕ ಇದ್ದ ಜಿಲ್ಲೆಯ ವಿಧಾನಸಭೆ ಮತಕ್ಷೇತ್ರಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕ್ಷೇತ್ರದ ಹೆಸರು ಬದಲಾದರೂ, ಸಂಖ್ಯೆಯಲ್ಲಿ ಯಥಾವತ್ತಾಗಿ ಮುನ್ನಡೆದಿವೆ.