ಶಿರಸಿ: ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚಿಗೆ ಉಪಸ್ಥಿತರಿದ್ದರು ಎನ್ನಲಾದ ಮದುವೆಯಲ್ಲಿ ಭಾಗಿಯಾಗಿದ್ದ 32 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು. ತದನಂತರ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಕಳೆದ 2 ದಿನದಿಂದ ಅದೇ ಮದುವೆಯಲ್ಲಿ ಭಾಗಿಯಾಗಿದ್ದ 32 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಆದರೆ ಯಾರ ಮೂಲಕ ಕೊವಿಡ್ ಸೋಂಕು ಹರಡಿದೆ ಎಂಬುದು ಈವರೆಗೂ ಖಚಿತವಾಗಿಲ್ಲ. ಮದುವೆ ಕಾರ್ಯಕ್ರಮದಲ್ಲಿ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಸ್ಕ್ ಇಲ್ಲದೇ ಭಾಗವಹಿಸಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹಡಿದಾಡಿತ್ತು.
ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಸ್ಕ್ ಧರಿಸದೇ ಮದುವೆಯಲ್ಲಿ ಭಾಗವಹಿಸಿದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಆಡಿಯೋ ತುಣುಕುಗಳು ಹಡಿದಾಡಿದ್ದವು. ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನಡೆಯನ್ನು ಟೀಕಿಸಿ ಆಡಿಯೋದನ್ನು ಮಾತನಾಡಲಾಗಿತ್ತು. “ಬೆಂಗಳೂರಿನಿಂದ ಸಿದ್ಧಾಪುರಕ್ಕೆ ಬಂದು ಸ್ಪೀಕರ್ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇವರು ಮದುವೆಯಲ್ಲಿ ಓಡಾಡಿದ್ರೂ ನಡೆಯುತ್ತೆ, ಜನರಿದ್ದಲ್ಲಿ ನಡೆದಾಡಿದ್ರೂ ನಡೆಯುತ್ತೆ”. “ಜನಸಾಮಾನ್ಯರು ಓಡಾಡದಿದ್ರೆ ಪೊಲೀಸರು ಲಾಠಿ ತೆಗೆದುಕೊಂಡು ಹೊಡೀತಾರೆ”. “ಇವರ ವಿರುದ್ಧ ಯಾರೂ ಮಾತಾನಾಡಲು ತಯಾರಿಲ್ಲವೇ” ಎಂದು ಆಡಿಯೋ ಮೂಲಕ ಕೆಲವು ಪ್ರಶ್ನಿಸಿದ್ದರು.
ಮೇ 10ರಿಂದಲೇ ಲಾಕ್ಡೌನ್
ಮೇ 10ರಿಂದ ಮೇ 24ರವರೆಗೆ ಜಾರಿಯಾಗುವ ಕರ್ನಾಟಕ ಲಾಕ್ಡೌನ್ನಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಳ್ಳಲು ಅವಕಾಶವಿದೆ. ಸಾರ್ವಜನಿಕರು ಹತ್ತಿರದ ಆಸ್ಪತ್ರೆಗಳಿಗೆ ನಡೆದೇ ತೆರಳಿ ಲಸಿಕೆ ತೆಗೆದುಕೊಳ್ಳಬಹುದು. ಹೋಟೆಲ್ಗಳಿಗೆ ಪಾರ್ಸೆಲ್ ತರಲು ಹೋಗಬೇಕಾದರೆ ನಡೆದುಕೊಂಡೇ ಹೋಗಬೇಕು. ವಾಹನಗಳಲ್ಲಿ ಹೋಟೆಲ್ಗಳಿಗೆ ಹೋಗಬಾರದು. ಹಗಲು ವೇಳೆ ಯಾವುದೇ ವಾಹನಗಳಿಗೆ ಅವಕಾಶವಿಲ್ಲ. ಯಾವುದೇ ಪಾಸ್ ವ್ಯವಸ್ಥೆಯನ್ನು ಜಾರಿಗೆ ತರಲ್ಲ. ಪ್ರಯಾಣಿಸುವವರು ಸೂಕ್ತ ಕಾರಣ ನೀಡಲೇಬೇಕು. ಇದು ಸಂಪೂರ್ಣ ಲಾಕ್ಡೌನ್ ಅಲ್ಲ. ಇದು ಷರತ್ತುಬದ್ಧ ಲಾಕ್ಡೌನ್ ಎಂದು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೇಳಿದರು.
ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು.