ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರಿಗೆ ಚಿತ್ರರಂಗದಲ್ಲಿ ಹಲವರ ಜೊತೆ ಒಡನಾಟ ಇದೆ. ಅವರಿಗೆ ಇಂದು (ಡಿ.13) ಜಾಮೀನು ಸಿಕ್ಕಿದ್ದಕ್ಕೆ ಬಹುತೇಕ ಸೆಲೆಬ್ರಿಟಿಗಳಿಗೆ ಸಂತಸ ಆಗಿದೆ. ಸೋಶಿಯಲ್ ಮೀಡಿಯಾ ಮೂಲಕ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಕೆಲವು ಸೆಲೆಬ್ರಿಟಿಗಳು ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ನಟ ಪ್ರಕಾಶ್ ರಾಜ್ ಅವರು ಈ ಬಗ್ಗೆ ಮಾತನಾಡಲು ನಿರಾಕರಿಸಿದ್ದಾರೆ. ದರ್ಶನ್ಗೆ ಜಾಮೀನು ಸಿಕ್ಕ ಬಳಿಕ ಆ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದಕ್ಕೆ ತುಂಬ ವ್ಯಂಗ್ಯವಾಗಿ ಪ್ರಕಾಶ್ ರಾಜ್ ಅವರು ಉತ್ತರ ನೀಡಿದ್ದಾರೆ.
ಮೈಸೂರಿನಲ್ಲಿ ನಟ ಪ್ರಕಾಶ್ ರೈ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಅವರು ಸುದ್ದಿಗೋಷ್ಠಿ ನಡೆಸುತ್ತಿರುವಾಗಲೇ ದರ್ಶನ್ಗೆ ಜಾಮೀನು ಸಿಕ್ಕಿತು. ಪ್ರಕಾಶ್ ರಾಜ್ ಕೂಡ ಕನ್ನಡ ಚಿತ್ರರಂಗದ ಪ್ರಮುಖ ನಟನಾದ್ದರಿಂದ ಅವರಿಗೆ ಈ ಕುರಿತು ಅಭಿಪ್ರಾಯ ಕೇಳಲಾಯಿತು. ಆದರೆ ಅದಕ್ಕೆ ಉತ್ತರಿಸಲು ಪ್ರಕಾಶ್ ರಾಜ್ ಇಷ್ಟಪಡಲಿಲ್ಲ. ಹಾಗಂತ ಅವರು ನೋ ಕಮೆಂಟ್ಸ್ ಎಂದು ಕೂಡ ಸುಮ್ಮನಾಗಲಿಲ್ಲ.
ಪ್ರಕಾಶ್ ರಾಜ್ ಅವರು ಶ್ರೀರಂಗಪಟ್ಟಣದಲ್ಲಿ ‘ನಿರ್ದಿಗಂತ’ ರಂಗಶಾಲೆಯನ್ನು ನಡೆಸುತ್ತಿದ್ದಾರೆ. ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳ ಕುರಿತಾಗಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಮಯದಲ್ಲಿ ದರ್ಶನ್ ಬಗ್ಗೆ ಪ್ರಶ್ನೆ ಕೇಳಿದ್ದರಿಂದ ಪ್ರಕಾಶ್ ರಾಜ್ ವ್ಯಂಗ್ಯ ಮಾಡಿದರು. ‘ನಾನು ಮಕ್ಕಳ ಬಗ್ಗೆ ಮಾತನಾಡಲು ಬಂದಿದ್ದೇನೆ. ಕಳ್ಳ ನನ್ನ ಮಕ್ಕಳ ಬಗ್ಗೆ ಅಲ್ಲ. ಹಾಗಾಗಿ ಮಕ್ಕಳ ಬಗ್ಗೆ ಮಾತ್ರ ಮಾತನಾಡೋಣ’ ಎಂದು ಪ್ರಕಾಶ್ ರಾಜ್ ಅವರು ಹೇಳಿದ್ದಾರೆ.
Laxmi News 24×7