ಮಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತಿದೆ. ಈ ಮಾತು ಮಂಗಳೂರಿನಲ್ಲಿ ನಡೆದಿರೋ ಮನಕಲಕುವ ಘಟನೆಗೆ ಹೇಳಿ ಮಾಡಿಸಿದಂತಿದೆ. ಗಂಡ-ಹೆಂಡತಿಯ ಮಧ್ಯೆ ನಡೆದ ಜಗಳದಿಂದ ಮುದ್ದಾದ ಮಕ್ಕಳು ಪ್ರಾಣಬಿಟ್ಟಿವೆ. ಹೆತ್ತಪ್ಪನೇ ತನ್ನ ಕೈಯ್ಯಾರೆ ಮಕ್ಕಳನ್ನ ಸಾವಿನ ಕೂಪಕ್ಕೆ ತಳ್ಳಿದ್ದಾನೆ.
ಕೌಟುಂಬಿಕ ಸಮಸ್ಯೆಗೆ ಅಮಾಯಕ ಮಕ್ಕಳು ಬಲಿ
ಮೂವರು ಮಕ್ಕಳನ್ನ ಬಾವಿಗೆ ತಳ್ಳಿ ಕೊಂದ ತಂದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದು ಹೋಗಿದೆ. ಹೆತ್ತ ತಂದೆಯೇ ಈ ಮೂರು ಮಕ್ಕಳನ್ನ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾನೆ. ಈ ಫೋಟೋದಲ್ಲಿರೋ ವ್ಯಕ್ತಿಯೇ ಕೊಲೆಗಡುಕ ಪಾಪಿ ತಂದೆ.
ದಕ್ಷಿಣ ಕನ್ನಡ ಜಿಲ್ಲೆ ಹೊಸ ಕಾವೇರಿಯ ವಿಜೇತ್ ಶೆಟ್ಟಿಗಾರ್ ಕೌಟುಂಬಿಕ ಸಮಸ್ಯೆಗೆ ತಮ್ಮ ಮೂರು ಮಕ್ಕಳನ್ನ ಬಲಿ ಕೊಟ್ಟಿದ್ದಾನೆ. ರಶ್ಮಿತಾ , ಉದಯ್, ದಕ್ಷಿತ್ ಎಂಬ ತನ್ನ ಮುದ್ದಾದ ಮೂರು ಮಕ್ಕಳನ್ನ ಮೊದಲು ಕರೆತಂದು ಬಾವಿಗೆ ತಳ್ಳಿ ಸಾಯಿಸಿಬಿಟ್ಟಿದ್ದಾನೆ. ಬಳಿಕ ತನ್ನ ಪತ್ನಿಯನ್ನ ಕರೆತಂದು ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ವಿಜೇತ್ ಶೆಟ್ಟಿಗಾರ್ ಮತ್ತು ಆತನ ಪತ್ನಿ ರಕ್ಷಿಸಿದ್ದಾರೆ. ದುರಾದೃಷ್ಟವಶಾತ್ ಅಷ್ಟೊತ್ತಿಗಾಗಲೇ ಮೂರು ಮಕ್ಕಳು ನೀರಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.