ಕೋಲಾರ,ಡಿ.12- ಕಳೆದ ನಾಲ್ಕು ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ವೇತನ ನೀಡಿಲ್ಲ ಎಂದು ಆರೋಪಿಸಿ ಕಾರ್ಮಿಕರು ಕಂಪೆನಿಗೆ ಕಲ್ಲು ತೂರಿ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿರುವ ಘಟನೆ ನಗರ ಹೊರ ವಲಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಜಿಲ್ಲೆಯ ಹೊರ ವಲಯದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪೆನಿಯ ನೌಕರರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ನೀಡದೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಬರುತ್ತಿತ್ತು. ಇದರಿಂದ ರೊಚ್ಚಿಗೆದ್ದ ನೌಕರರು ಏಕಾಏಕಿ ಕಂಪೆನಿಗೆ ನುಗ್ಗಿ ಗಾಜುಗಳನ್ನು ಪುಡಿಪುಡಿ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ನಮಗೆ ನಾಲ್ಕು ತಿಂಗಳಿನಿಂದ ವೇತನ ನೀಡಿಲ್ಲ ಎಂದು ಆರೋಪಿಸಿರುವ ನೌಕರರು, ನಮ್ಮ ಜೀವನ ಹೇಗೆ ನಡೆಯಬೇಕು. ಈ ಕೆಲಸವನ್ನೇ ನಂಬಿಕೊಂಡಿದ್ದು, ನಮ್ಮ ಕುಟುಂಬದವರ ಗತಿ ಏನಾಗಬೇಕು ? ನಾವು ಇಂದು ಅಥವಾ ನಾಳೆ ಸಂಬಳ ಕೊಡಬಹುದೆಂದು ಸಂಯಮದಿಂದ ಕೆಲಸ ಮಾಡಿಕೊಂಡು ಬಂದಿದ್ದೇವೆ. ಆದರೆ, ನಾಲ್ಕು ತಿಂಗಳಾರೂ ನಮಗೆ ಬರಬೇಕಾದ ವೇತನವನ್ನು ನೀಡಿಲ್ಲ. ಹಾಗಾಗಿ ಅಂತಿಮವಾಗಿ ನಾವು ಪ್ರತಿಭಟನೆಗೆ ಇಳಿಯಬೇಕಾಯಿತು ಎಂದು ನೌಕರರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ರಾತ್ರಿ ಪಾಳಿ ಕೆಲಸ ಮುಗಿಸಿದ ಹಾಗೂ ಬೆಳಗ್ಗೆ ಕೆಲಸಕ್ಕೆ ಹಾಜರಾಗುವ ನೌಕರರು ಜತೆಗೂಡಿ ಕಂಪೆನಿ ಮೇಲೆ ದಾಳಿಮಾಡಿದ್ದಾರೆ. ಗುತ್ತಿಗೆದಾರರು ವೇತನ ತಾರತಮ್ಯ ಮಾಡುತ್ತಿದ್ದು, ನಮಗೆ ಸಂಬಂಳ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ಸತ್ಯವತಿ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ರೆಡ್ಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು.
ಸುದ್ದಿ ತಿಳಿಯುತ್ತಿದ್ದಂತೆ ವೇಮಗಲ್ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು. ಸ್ಥಳದಲ್ಲೇ ಪೊಲೀಸರು ಮೊಕ್ಕಾಂ ಹೂಡಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.