ಚೆನ್ನೈ: ನಿನ್ನೆ (ಏಪ್ರಿಲ್ 16) ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಮಿಳು ಚಿತ್ರರಂಗದ ಹಿರಿಯ ಹಾಸ್ಯ ಕಲಾವಿದ ವಿವೇಕ್ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ (ಏಪ್ರಿಲ್ 17) ವಿಧಿವಶರಾಗಿದ್ದಾರೆ.
ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರದ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದಿದ್ದರು.
ಸೂಪರ್ಸ್ಟಾರ್ ರಜಿನಿಕಾಂತ್ರನ್ನು ತಮಿಳು ಚಿತ್ರರಂಗಕ್ಕೆ ಪರಿಚಯಿಸಿದ ಹಿರಿಯ ನಿರ್ದೇಶಕ ಕೆ. ಬಾಲಚಂದರ್ ಅವರೇ ವಿವೇಕ್ರನ್ನು ಸಹ ಪರಿಚಯಿಸಿದರು. ವಿವೇಕ್ ಸಾಕಷ್ಟು ಚಿತ್ರಗಳಲ್ಲಿ ಹಾಸ್ಯ ಕಲಾವಿದರಾಗಿ ನಟಿಸಿದ್ದಾರೆ. ಖುಷಿ, ಮಿನ್ನಾಲೆ, ಮುಗವರೀ, ದಮ್ ದಮ್ ದಮ್, ಶಿವಾಜಿ ಸೇರಿದಂತೆ ಹಲವಾರು ಪ್ರಮುಖ ಚಿತ್ರಗಳಲ್ಲಿ ವಿವೇಕ್ ಹಾಸ್ಯದ ಹೊಳೆಯನ್ನೇ ಹರಿಸಿದ್ದಾರೆ.
ರಜಿನಿಕಾಂತ್, ಕಮಲ್ಹಾಸ್, ಮಾಧವನ್, ವಿಜಯ್, ಅಜಿತ್ ಮತ್ತು ಸೂರ್ಯರಂತಹ ಘಟಾನುಘಟಿ ನಾಯಕರು ಜತೆ ವಿವೇಕ್ ತೆರೆಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ನಟ ಪ್ರೇಮ್ ಅಭಿನಯದ ಚಂದ್ರ ಚಿತ್ರದಲ್ಲಿ ನಟಿಸುವ ಮೂಲಕ ವಿವೇಕ್ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ತಮಿಳುನಾಡು ಫಿಲ್ಮ್ಫೇರ್ ಅವಾರ್ಡ್, ತಮಿಳುನಾಡು ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ವಿವೇಕ್ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೂ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ವಿವೇಕ್ 2009ರಲ್ಲಿ ಭಾಜನರಾಗಿದ್ದರು.
Laxmi News 24×7