Breaking News

ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ: ಸೆ.28 ರಿಂದ ಹುಬ್ಬಳ್ಳಿ – ಕೊಲ್ಲಂ ವಿಶೇಷ ರೈಲು ಸೇವೆ ಆರಂಭ

Spread the love

ನವದೆಹಲಿ/ಹುಬ್ಬಳ್ಳಿ: ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಕೇಂದ್ರ ಸರ್ಕಾರ ದಸರಾ ಹಬ್ಬದಲ್ಲಿ ಸಿಹಿ ಸುದ್ದಿ ನೀಡಿದೆ. ಶಬರಿಮಲೆಗೆ ತೆರಳುವ ಯಾತ್ರಿಕರಿಗೆ ಅನುಕೂಲವಾಗಲು ವಿಶೇಷ ರೈಲು ಸಂಚಾರ ಆರಂಭಿಸಲಾಗುತ್ತಿದೆ.

ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರ ಪ್ರಯತ್ನದ ಫಲವಾಗಿ ಹುಬ್ಬಳ್ಳಿಯಿಂದ ಕೊಲ್ಲಂವರೆಗೆ 22 ಕೋಚ್‌ಗಳುಳ್ಳ ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಇದೇ ಸೆಪ್ಟಂಬರ್‌ 28 ರಿಂದ ಸಂಚಾರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಯಾವ ಮಾರ್ಗದಲ್ಲಿ ರೈಲು ಸಂಚಾರ: ರಾಜ್ಯದ ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಬೀರೂರು, ಅರಸೀಕೆರೆ, ತುಮಕೂರು, ಬೆಂಗಳೂರು ಮಾರ್ಗವಾಗಿ ಹಾಗೂ ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್‌, ತಿರುಪುರ, ಪೊದನೂರ, ತ್ರಿಶೂರು, ಅಲುವಾ, ಎರ್ನಾಕುಲಂ ಟೌನ್​, ಕೊಟ್ಟಾಯಂ, ಚಂಗನಸ್ಸೇರಿ, ಚೆಂಗನ್ನೂರ್‌, ಕರುನಾಗಪಲ್ಲಿ, ಸಸ್ಥನಕೊಟ್ಟಾ ಮಾರ್ಗದಲ್ಲಿ ಈ ವಿಶೇಷ ರೈಲು ಸಂಚರಿಸಲಿದೆ.

ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿ ಮತ್ತು ಕೊಲ್ಲಂ ಮಧ್ಯೆ ಪ್ರತಿ ಭಾನುವಾರ ಮತ್ತು ಸೋಮವಾರ ಈ ವಿಶೇಷ ಎಕ್ಸ್‌ಪ್ರೆಸ್‌ ರೈಲು ಒಟ್ಟು 14 ವಾರ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.

ರೈಲು ಸಂಖ್ಯೆ 07313 ಸೆ.28ರಿಂದ ಪ್ರತಿ ಭಾನುವಾರ ಮಧ್ಯಾಹ್ನ 3.15ಕ್ಕೆ ಹುಬ್ಬಳ್ಳಿಯಿಂದ ಸಂಚರಿಸಲಿದ್ದರೆ, ರೈಲು ಸಂಖ್ಯೆ 07314 ಸೆ.29ರಿಂದ ಪ್ರತಿ ಸೋಮವಾರ ಸಂಜೆ 5 ಗಂಟೆಗೆ ಕೊಲ್ಲಂನಿಂದ ಸಂಚಾರ ಆರಂಭಿಸಲಿದೆ.

ದಸರಾ ಹಬ್ಬದ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದಿಂದ ಸಂಚರಿಸುವ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ರೈಲು ಸಂಚಾರ ವ್ಯವಸ್ಥೆಗಾಗಿ ಭಾರತೀಯ ಅಯ್ಯಪ್ಪ ಸೇವಾ ಸಂಘ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರಿಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಜೋಶಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನ ಸೆಳೆದು ವಿಶೇಷ ರೈಲು ಸಂಚಾರ ಸೇವೆ ಕಲ್ಪಿಸಿದ್ದಾರೆ.

ಅಯ್ಯಪ್ಪ ಸೇವಾ ಸಂಘದಿಂದ ಸಚಿವರಿಗೆ ಅಭಿನಂದನೆ: ಇದೇ ವೇಳೆ ಸಚಿವ ಪ್ರಲ್ಹಾದ್​ ಜೋಶಿ ಅವರು ತಮ್ಮ ಮನವಿಗೆ ಸ್ಪಂದಿಸಿ ರಾಜ್ಯದ ಅಯ್ಯಪ್ಪ ಭಕ್ತರಿಗೆ ವಿಶೇಷ ರೈಲು ಒದಗಿಸಿದ ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇತ್ತ ಭಾರತೀಯ ಅಯ್ಯಪ್ಪ ಸೇವಾ ಸಂಘದವರೂ ಸಹ ಸಚಿವ ಪ್ರಲ್ಹಾದ್​ ಜೋಶಿ ಸೇರಿದಂತೆ ನೈರುತ್ಯ ರೈಲ್ವೆ ವಲಯದ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.


Spread the love

About Laxminews 24x7

Check Also

BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು.

Spread the love BBK12 ಮುಕ್ತಾಯ ಬೆನ್ನಲ್ಲೇ ಕಿಚ್ಚ ಸುದೀಪ್, ಮ್ಯಾನೇಜರ್ ಚಂದ್ರಚೂಡ್ ವಿರುದ್ಧ ವಂಚನೆ ಆರೋಪ: ಕಮಿಷನರ್‌ಗೆ ದೂರು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ