ಬೆಳಗಾವಿ: ಮಹಾರಾಷ್ಟ್ರ ಬಿಟ್ಟರೆ ಗಣೇಶ ಚತುರ್ಥಿ ಅದ್ಧೂರಿ ಆಚರಣೆಗೆ ಬೆಳಗಾವಿ ಪ್ರಸಿದ್ಧಿ. ಹಾಗಾಗಿ, ನಗರ ಸೇರಿದಂತೆ ಪ್ರತಿಯೊಂದು ಹಳ್ಳಿಗಳ ಓಣಿ ಓಣಿಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಭರದ ಸಿದ್ಧತೆ ನಡೆದಿದೆ. ಆದರೆ, ಜಿಲ್ಲೆಯ ಈ ಗ್ರಾಮದಲ್ಲಿ ಕಳೆದ 80 ವರ್ಷಗಳಿಂದ ಊರಿಗೆ ಒಂದೇ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾ, ಭಕ್ತಿಯಿಂದ ಪೂಜಿಸಿಕೊಂಡು ಬರುತ್ತಿರುವುದು ಗಮನಾರ್ಹ.
ಗಣೇಶ ಹಬ್ಬ ಬಂತು ಎಂದರೆ ಸಾಕು ಸಾರ್ವಜನಿಕ ಗಣೇಶ ಮಂಡಳಿಗಳು ಫುಲ್ ಆಕ್ಟಿವ್ ಆಗುತ್ತವೆ. ಗಲ್ಲಿ ಗಲ್ಲಿಗಳಲ್ಲಿ ಬೃಹದಾಕಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಡಿಜೆ ಹಚ್ಚಿ ಕುಣಿದು ಕುಪ್ಪಳಿಸಿ ಸಂಭ್ರಮಿಸುವುದು ಸಾಮಾನ್ಯ. ಇಡೀ ರಾಜ್ಯದ ಗಣೇಶೋತ್ಸವ ಒಂದು ತೂಕವಾದರೆ, ಬೆಳಗಾವಿಯದ್ದೇ ಮತ್ತೊಂದು ತೂಕ ಎಂಬ ಮಾತಿದೆ. ಇಲ್ಲಿನ ನಗರ, ಪಟ್ಟಣ, ಗ್ರಾಮಗಳ ಪ್ರತಿ ಓಣಿಗಳಲ್ಲೂ ಸಾರ್ವಜನಿಕ ಗಣೇಶ ಮೂರ್ತಿಗಳು ಕಾಣ ಸಿಗುತ್ತವೆ. ಚಿಕ್ಕ ಊರಿದ್ದರೂ ಕನಿಷ್ಠ ಐದಕ್ಕೂ ಅಧಿಕ ಮೂರ್ತಿಗಳು ಇರುತ್ತವೆ. ಆದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಸಮಾಧಿ ಸ್ಥಳ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಮಾತ್ರ “ಒಂದು ಊರು ಒಂದೇ ಗಣಪ” ಧ್ಯೇಯದೊಂದಿಗೆ ಕಳೆದ 80 ವರ್ಷಗಳಿಂದ ಒಂದೇ ಸಾರ್ವಜನಿಕ ಗಣೇಶನ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ. ಈ ಮೂಲಕ ಗ್ರಾಮಸ್ಥರು ಏಕತೆ ಸಂದೇಶ ಸಾರುತ್ತಿದ್ದಾರೆ.
1944ರಲ್ಲಿ ನಂದಗಡದ ಬಜಾರ್ ಪೇಟೆಯಲ್ಲಿ ಮೊದಲ ಬಾರಿಗೆ ಗಣೇಶನ ಮೂರ್ತಿ ಕೂಡಿಸಲಾಗಿತ್ತು. ಆ ವೇಳೆ ಗ್ರಾಮದ ಬಸಪ್ಪ ಅರಗಾವಿ, ಚಂಬಣ್ಣ ಕಾಪಸೆ, ಬಾಬುರಾವ್ ದಲಾಲ್, ಕೃಷ್ಣಾ ಗುನಾಜಿ, ಆರ್.ಕೆ.ಪಾಟೀಲ, ಮುರುಳೀಧರ ನಾಯಕ ಸೇರಿ ಮತ್ತಿತರರು ಸಾರ್ವಜನಿಕ ಗಣೇಶ ಮಂಡಳಿ ರಚಿಸಿ ಈ ಪರಂಪರೆಗೆ ನಾಂದಿ ಹಾಡಿದ್ದರು. ಈಗ ಆ ಪರಂಪರೆಯನ್ನು ಇಂದಿನ ಪೀಳಿಗೆಯೂ ಮುಂದುವರಿಸಿಕೊಂಡು ಹೋಗುತ್ತಿದೆ.

1944ರಿಂದ ಇಲ್ಲಿಯವರೆಗೆ ಬಜಾರ್ ಪೇಟೆಯಲ್ಲೆ ಗಣೇಶನ ಪ್ರತಿಷ್ಠಾಪಿಸುತ್ತಿರುವುದು ಗಮನಿಸಬೇಕಾದ ಸಂಗತಿ. ಎಲ್ಲ ಜಾತಿ, ಧರ್ಮಿಯರು ಒಗ್ಗಟ್ಟಾಗಿ ಆಚರಿಸುತ್ತಿದ್ದಾರೆ. ಇದೇ ಊರಿನ ಕುಂಬಾರ ಮನೆತನದವರೇ ಮೂರ್ತಿ ತಯಾರಿಸುತ್ತಾರೆ. ಈಗಾಗಲೇ ಮಂಡಳಿ ಸದಸ್ಯರು ಮಂಟಪ ಹಾಕುವ ಸಿದ್ಧತೆಯಲ್ಲಿಯೂ ತೊಡಗಿದ್ದಾರೆ.
ಇದು ನಮ್ಮೂರಿನ ಒಗ್ಗಟ್ಟು: ಊರಿನಲ್ಲಿ ಒಗ್ಗಟ್ಟಿರಬೇಕೆಂದು ಹಿರಿಯರು “ಒಂದು ಊರು ಒಂದೇ ಗಣಪತಿ” ಅಭಿಯಾನಕ್ಕೆ ಚಾಲನೆ ಕೊಟ್ಟಿದ್ದರು. ಆ ಪರಂಪರೆ ಮುಂದುವರಿದಿತ್ತು. ಕಳೆದ 20 ವರ್ಷಗಳ ಹಿಂದೆ ಒಮ್ಮೆ ಊರಿನ ಯುವಕರು ಬೇರೆ ಗಲ್ಲಿಯಲ್ಲಿ ಮತ್ತೊಂದು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮುಂದಾಗಿದ್ದರು. ಆಗ ಹಿರಿಯರು ಮತ್ತೊಂದು ಗಣಪ ಬೇಡ, ಇಲ್ಲಿಯೇ ನೀವೇ ಜವಾಬ್ದಾರಿ ತೆಗೆದುಕೊಂಡು ನಡೆಸುವಂತೆ ತಿಳಿ ಹೇಳಿದ್ದರು. ಅದಾದ ಬಳಿಕ ಯಾರೂ ಆ ರೀತಿ ಪ್ರಯತ್ನಕ್ಕೆ ಕೈ ಹಾಕಿಲ್ಲ ಎನ್ನುತ್ತಾರೆ ಮಂಡಳಿ ಅಧ್ಯಕ್ಷ ಪಿ.ಕೆ.ಪಾಟೀಲ.

ಪರಂಪರೆ ಮುಂದುವರಿದಿದೆ: ಗ್ರಾಮಸ್ಥ ಶಿವಾನಂದ ತುರಮರಿ ಮಾತನಾಡಿ, “ನಮ್ಮದು ಗಂಡು ಮಟ್ಟಿದ ನಾಡು. ಸಂಗೊಳ್ಳಿ ರಾಯಣ್ಣನ ಗಲ್ಲಿಗೇರಿಸಿದ ಊರು. ನಮ್ಮೂರಿನ ಒಗ್ಗಟ್ಟನ್ನು ತೋರಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಒಂದೇ ಗಣಪನ ಪೂಜಿಸಿಕೊಂಡು ಬಂದಿದ್ದೇವೆ. ನಮ್ಮೂರಿನಲ್ಲಿ ಆ ಗಲ್ಲಿ, ಈ ಗಲ್ಲಿ ಅಂತಾ ಇಲ್ಲ. ಇಡೀ ಊರಿಗೆ ಒಂದೇ ಗಣಪ. ಈ ಪರಂಪರೆ ಹೀಗೆ ಮುಂದುವರಿಸಿಕೊಂಡು ಹೋಗುತ್ತೇವೆ. ಜಾತಿ, ಧರ್ಮ, ಜನಾಂಗ, ಭಾಷೆ ಬೇಧ ಭಾವ ಇಲ್ಲದೇ ಏಕತಾ ಭಾವನೆಯಿಂದ ನಾವೆಲ್ಲಾ ಬದುಕುತ್ತಿದ್ದೇವೆ” ಎಂದರು.

ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡ ಮಂಟಪ (ETV Bharat)
ಸಮಾಜದಲ್ಲಿ ಏಕತೆ ಭಾವನೆ ಬೆಳೆಯುತ್ತೆ: 15 ಸಾವಿರ ಜನಸಂಖ್ಯೆ ಇರುವ ನಮ್ಮೂರಿನಲ್ಲಿ ಎಲ್ಲರೂ ತನು, ಮನ, ಧನದಿಂದ ಗಣೇಶನಿಗೆ ಸೇವೆ ಸಲ್ಲಿಸುತ್ತೇವೆ. ಸುತ್ತಲಿನ ಹತ್ತಾರು ಗ್ರಾಮಗಳು ಸೇರಿದಂತೆ ಗೋವಾ, ಮಹಾರಾಷ್ಟ್ರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಗಣೇಶನ ದರ್ಶನಕ್ಕೆ ಬರುತ್ತಾರೆ. ಅಲ್ಲದೇ ಬೇಡಿದ ವರ ಕೊಡುತ್ತಾನೆ ಎನ್ನುವ ನಂಬಿಕೆಯೂ ಇದೆ. ನಮ್ಮೂರಂತೆ ಎಲ್ಲ ಊರಿನವರು ಒಂದೇ ಗಣಪನ ಮಾದರಿ ಅನುಸರಿಸಿದರೆ ನಮ್ಮ ಸಮಾಜದಲ್ಲಿ ಏಕತೆ ಭಾವನೆ ಬೆಳೆಯಲಿದೆ ಎಂಬುದು ರಾಯನಗೌಡ ದೇಮಟ್ಟಿ ಅಭಿಪ್ರಾಯ.
Laxmi News 24×7