ಗದಗ, ಫೆ.20: ಸತ್ತವರ ಬ್ಯಾಂಕ್ ಖಾತೆಗೂಗೃಹಲಕ್ಷ್ಮಿ ಹಣಜಮೆಯಾಗಿದ್ದು, ಅದನ್ನು ಪಡೆಯಲು ಕುಟುಂಬಸ್ಥರು ಹರಸಾಹಸ ಪಡುತ್ತಿರುವ ಘಟನೆ ಗದಗ ಜಿಲ್ಲೆಯ ನರಗುಂದ(Naragunda) ತಾಲೂಕಿನ ಜಗಾಪುರ ಗ್ರಾಮದಲ್ಲಿ ನಡೆದಿದೆ. ಜಗಾಪುರ ಗ್ರಾಮದ ನಿಂಗವ್ವ ಶಿವಪ್ಪ ಹೂಲಿ ಎಂಬಾಕೆ ಗೃಹ ಲಕ್ಷಿ ಯೋಜನೆ ಜಾರಿಗೆ ಬರುವ ಮುನ್ನವೇ ಅಂದರೆ ಆಗಸ್ಟ್ 26, 2020 ರಂದು ಮೃತಪಟ್ಟಿದ್ದಾರೆ. ಆದರೆ, ಸೊಸೆ ಲಲಿತಾ ಹೂಲಿ ಗೃಹಲಕ್ಷ್ಮಿ ಯೋಜನೆ ಅಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದಳು.
ಈ ಹಿನ್ನಲೆ ಮೃತಳ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಜಮಾ ಆಗಿದೆ. ಈಗಲೂ ಅನೇಕ ಮಹಿಳೆಯರು ಗೃಹಲಕ್ಷ್ಮಿ ಹಣ ಜಮೆಯಾಗದೇ ಪರದಾಡುತ್ತಾ ಕಚೇರಿಗಳಿಗೆ ಅಲೆದಾಟ ನಡೆಸಿದ್ದಾರೆ. ಆದರೆ, ಗದಗ ಜಿಲ್ಲೆಯಲ್ಲಿ ನಿಧನ ಹೊಂದಿರುವ ಮಹಿಳೆಯೊಬ್ಬರಿಗೆ ಹಣ ಜಮೆಯಾಗಿದೆ. ಇಂತಹ ಪ್ರಕರಣಗಳು ನರಗುಂದ ತಾಲೂಕಿನಲ್ಲಿ 7 ರಿಂದ 8 ಪ್ರಕರಣಗಳು ಬೆಳಕಿಗೆ ಬಂದಿದೆ. ನಿಂಗವ್ವ ಮೃತಪಟ್ಟಿದ್ದರಿಂದ ನ್ಯಾಯಬೆಲೆ ಅಂಗಡಿಯಲ್ಲಿ ಈ ಕುಟುಂಬದ ನಾಲ್ವರಿಗೆ ಮಾತ್ರ ಪಡಿತರ ವಿತರಣೆ ಮಾಡಲಾಗುತ್ತಿದೆ. ಆದರೆ, ಅತ್ತೆ ಮೃತಪಟ್ಟಿರುವುದರಿಂದ ಗೃಹಲಕ್ಷ್ಮಿ ಹಣವನ್ನು ತನ್ನ ಖಾತೆಗೆ ಜಮಾ ಮಾಡುವಂತೆ ಸೊಸೆ ಅಲೆದಾಟ ನಡೆಸಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.