ಬೆಳಗಾವಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಂಡ ವಿಚಾರದ ಹಿನ್ನೆಲೆ ಮೌನ ಪ್ರತಿಭಟನೆಗೆ ಅಖಿಲ ಭಾರತೀಯ ಕಾಂಗ್ರೆಸ್ ಕರೆ ನೀಡಿತ್ತು.
ಇಂದು ಬುಧವಾರ ಬೆಳಗಾವಿಯ ಕಾಂಗ್ರೆಸ್ ಭವನದ ಮುಂಭಾಗದಲ್ಲಿ ಜಿಲ್ಲೆಯ ಕೈ ಕಾರ್ಯಕರ್ತರು ಧರಣಿ ನಡೆಸಿದರು. ಈ ವೇಳೆ ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಸಾಥ್ ನೀಡಿದರು.
ರಾಹುಲ್ ಗಾಂಧಿಯವರ ಸತ್ಯದ ನಡಿಗೆಯಲ್ಲಿ ನಮ್ಮ ಹೆಜ್ಜೆ, ಸರ್ವಾಧಿಕಾರಿ ಧೋರಣೆಯ ಮೋದಿಯವರಿಗೆ ಧಿಕ್ಕಾರ, ನಮ್ಮ ಹೆಜ್ಜೆ ಜನತಾ ನ್ಯಾಯಾಲಯದತ್ತ ಎಂಬ ಬರಹದ ಫಲಕಗಳನ್ನು ಹಿಡಿದು ಬೆಳಗ್ಗೆ 10ಗಂಟೆಯಿಂದ 5ಗಂಟೆವರೆಗೆ ಮೌನವಾಗಿ ಪ್ರತಿಭಟನೆ ನಡೆಸಿದರು.
ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಮಾತನಾಡಿ, ”ಕೇಂದ್ರ ಸರ್ಕಾರದ ಸೇಡಿನ ಮನೋಭಾವದಿಂದ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ದೃಢಪಡಿಸಲು, ಅದಕ್ಕೆ ಬೆಂಬಲಿಸಲು ನಾವೆಲ್ಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇವೆ” ಎಂದರು.
ಎಂಎಲ್ಸಿ ಬಿ.ಕೆ. ಹರಿಪ್ರಸಾದ್ ಗರಂ: ಕಾಂಗ್ರೆಸ್ ಸರ್ಕಾರ ಬಂದಾಗ ಕೊಲೆ, ಗಲಾಟೆಗಳು ಜಾಸ್ತಿಯಾಗುತ್ತವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ”ಮಂಗಳೂರು, ಬೆಂಗಳೂರು ಸೇರಿ ರಾಜ್ಯದ ಅನೇಕ ಜೈಲುಗಳಲ್ಲಿ ಬಹಳಷ್ಟು ಅಪರಾಧಿಗಳಿದ್ದಾರೆ. ಅವರೆಲ್ಲಾ ಕಾಂಗ್ರೆಸ್ ಬಂದ ಮೇಲೆ ಜೈಲಲ್ಲಿದ್ದಾರಾ ಎಂದು ಕಟೀಲ ಮೊದಲು ಹೇಳಲಿ. ಅಪರಾಧ ಚಟುವಟಿಕೆ ಮಾಡಿದವರು ಜೈಲಲ್ಲಿ ಇರುತ್ತಾರೆ. ಅದಕ್ಕೆಲ್ಲಾ ಕಾಂಗ್ರೆಸ್ ಹೊಣೆಯಲ್ಲ. ಪ್ರಸ್ತುತ ಹಾದಿ ಬೀದಿಯಲ್ಲಿ ಕೊಚ್ಚಿ ಕೊಲೆ ಮಾಡುವುದು ನಿಂತಿದೆ. ನೈತಿಕ ಪೊಲೀಸ್ ಗಿರಿ ಮಾಡುವವರು ಈ ರೀತಿ ಆಪಾದನೆ ಮಾಡುತ್ತಾರೆ” ಎಂದರು.