ಮುಂಬೈ: ಮಹಾರಾಷ್ಟ್ರದ ರಾಜಕೀಯದ ಕುತೂಹಲ ಇನ್ನೂ ತಣ್ಣಗಾಗಿಲ್ಲ. ಯಾವಾಗ ಸರ್ಕಾರ ಪತನವಾಗುವುದೋ, ಯಾವಾಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ಕೊಡುವರೋ ಎಂದು ರೆಬೆಲ್ ಶಾಸಕರು ಕಾಯುತ್ತಿದ್ದಾರೆ.
ಅದೇ ವೇಳೆ ಕುತೂಹಲದ ಬೆಳವಣಿಗೆಯೊಂದರಲ್ಲಿ ಬುಧವಾರ (ಜೂನ್ 22) ಮಹಾರಾಷ್ಟ್ರ ಸರ್ಕಾರದ ಪತನಕ್ಕೆ ಕಾರಣವಾಗಿರುವ, ಶಿವಸೇನೆಯ ಪ್ರಬಲ ನಾಯಕ ಏಕನಾಥ ಶಿಂಧೆ ಗುಂಪಿನಿಂದ ಶಾಸಕ ನಿತಿನ್ ದೇಶ್ಮುಖ್ ಹಾಗೂ ಶಾಸಕ ಕೈಲಾಸ್ ಪಾಟೀಲ್ ತಪ್ಪಿಸಿಕೊಂಡು ಬಂದಿದ್ದರು.
ಸೀದಾ ಉದ್ಧವ್ ಠಾಕ್ರೆ ಬಳಿ ಬಂದಿದ್ದ ಇವರು, ತಾವು ಠಾಕ್ರೆ ಪರ ಎಂದು ಹೇಳಿಕೊಂಡಿದ್ದರು.
ಈ ಕುರಿತು ಮಾತನಾಡಿದ್ದ ದೇಶ್ಮುಖ್, ನಾನು ಶಿಂಧೆ ಕ್ಯಾಂಪ್ನಿಂದ ತಪ್ಪಿಸಿಕೊಂಡು ಬಂದಿದ್ದೇನೆ. ನನ್ನನ್ನು ಕಿಡ್ನ್ಯಾಪ್ ಮಾಡಿಕೊಂಡು ಗುಜರಾತ್ನ ಸೂರತ್ಗೆ ಕರೆದುಕೊಡು ಹೋಗಿದ್ದರು. ಮಧ್ಯರಾತ್ರಿ ಹೇಗೋ ತಪ್ಪಿಸಿಕೊಂಡು ಬಂದೆ. ನಸುಕಿನ 3 ಗಂಟೆ ವೇಳೆ ರಸ್ತೆ ಬದಿಗೆ ಬಂದು, ವಾಹನಕ್ಕಾಗಿ ಕಾಯುತ್ತಿದ್ದೆ. ಈ ಸಂದರ್ಭದಲ್ಲಿ ನೂರಾರು ಪೊಲೀಸರು ಸುತ್ತುವರಿದು ಆಸ್ಪತ್ರೆ ಸೇರಿಸಿದರು. ನನಗೆ ಹೃದಯಾಘಾತ ಆಗಿದೆ ನಾಟಕ ಮಾಡಿ ನನ್ನನ್ನು ಉಪಚರಿಸಿದಂತೆ ನಾಟಕ ಮಾಡಿದರು. ನನಗೆ ಏನೂ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಅವರು ನನ್ನನ್ನು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು’ ಎಂದು ತಿಳಿಸಿದ್ದರು.
ಈ ಹೇಳಿಕೆಗೆ ರೆಬೆಲ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದು, ಬಂಡಾಯ ಶಾಸಕರ ಗುಂಪಿನೊಂದಿಗೆ ನಿತಿನ್ ದೇಶ್ಮುಖ್ ಆರಾಮಾಗಿಯೇ ಇರುವ ಫೋಟೋಗಳು ಬಿಡುಗಡೆಮಾಡಿದ್ದಾರೆ. ದೇಶ್ಮುಖ್ ವಿಮಾನ ಏರುವ ಹಾಗೂ ವಿಮಾನದಲ್ಲಿ ಕುಳಿತುಕೊಂಡಿರುವ ಫೋಟೋಗಳು ಇವಾಗಿವೆ. ಅದರಲ್ಲಿ ದೇಶ್ಮುಖ್ ಅವರು ಸ್ವ ಇಚ್ಛೆಯಿಂದ ಹೋಗುತ್ತಿರುವಂತೆ ಗೋಚರಿಸುತ್ತಿದೆ!