ಬೆಂಗಳೂರು, ಏಪ್ರಿಲ್ 19 : ದೇಶದಲ್ಲಿ ಮತ್ತೆ ಕೊರೊನಾ ನಾಲ್ಕನೇ ಭೀತಿ ಶುರುವಾಗಿದ್ದು, ಈಗಾಗಲೇ ದೆಹಲಿ, ಉತ್ತರ ಪ್ರದೇಶ, ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಕರ್ನಾಟಕದಲ್ಲೂ ಕೊರೊನಾ ನಾಲ್ಕನೇ ಅಲೆ ಬರಬಹುದು ಎಂಬ ಭೀತಿ ಇರುವುದರಿಂದ ಪೋಷಕರು ಮಕ್ಕಳನ್ನ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.
ಇದರಿಂದ ಖಾಸಗಿ ಶಾಲೆಗಳಿಗೆ ಭಾರಿ ಹೊಡೆತ ಬಿದ್ದಿದ್ದು, ಮುಂಬರುವ ಶೈಕ್ಷಣಿಕ ವರ್ಷಕ್ಕೆ ಮಕ್ಕಳನ್ನ ದಾಖಲಿಸಿಕೊಳ್ಳಲು ಖಾಸಗಿ ಶಾಲೆಗಳು ಹೆಣಗಾಡುತ್ತಿವೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ವೇಳಾಪಟ್ಟಿ ಪ್ರಕಾರ ಮೇ 16 ರಂದು ಶಾಲೆಗಳು ಪುನಾರಂಭಗೊಳ್ಳಲಿದೆ. ಆದರೆ ಈ ಬಾರಿಯ 2022-23 ರ ಶೈಕ್ಷಣಿಕ ಪ್ರವೇಶ ದಾಖಲಾತಿಗಳು 20 ರಿಂದ 30% ರಷ್ಟು ಕಡಿಮೆಯಾಗಿದೆ. ಕೊರೊನಾ ಬರುವ ಮುಂಚಿನ ವರ್ಷಗಳಿಗೆ ಹೋಲಿಸಿದರೆ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ರೀತಿ ಕಡಿಮೆ ದಾಖಲಾತಿ ಆಗಲು ಎರಡು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ ಲಾಕ್ಡೌನ್ನಿಂದಾಗಿ ಸಾಂಕ್ರಾಮಿಕ ಸಮಯದಲ್ಲಿ ಬೆಂಗಳೂರಿನಿಂದ ವಲಸೆ ಹೋದ ಅನೇಕ ಪೋಷಕರು ಇನ್ನೂ ಹಿಂತಿರುಗಿಲ್ಲ, ಮತ್ತೊಂದು ಕಾರಣ ಎಂದರೆ ನಾಲ್ಕನೇ ಅಲೆ ಬರುವ ಭೀತಿಯಿಂದಲೂ ಕೂಡ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸುತ್ತಿಲ್ಲ ಅಂತ ಖಾಸಗಿ ಶಾಲೆಗಳು ಅವಲತ್ತುಕೊಂಡಿವೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪ್ರಧಾನ ಕಾರ್ಯದರ್ಶಿಯಾದ ಡಿ ಶಶಿಕುಮಾರ್ ಶಾಲಾ ದಾಖಲಾತಿ ಕುಸಿತದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, “ಪೋಷಕರಿಗೆ ಆರ್ಥಿಕ ಸಮಸ್ಯೆಯಿಲ್ಲ, ಬದಲಾಗಿ ಮುಂದೆ ನಾಲ್ಕನೇ ಅಲೇ ರಾಜ್ಯಕ್ಕೂ ಬರಬಹುದು ಎಂಬ ಭೀತಿ ಇದೆ. ಹೀಗಾಗಿ ಶಾಲೆಗಳಿಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಖಾಸಗಿ ಶಾಲೆಗಳಲ್ಲಿ 20 ರಿಂದ 30%ರಷ್ಟು ದಾಖಲಾತಿ ಕಡಿಮೆಯಾಗಲು ಕಾರಣವಾಗಿದೆ,” ಎಂದು ಡಿ ಶಶಿಕುಮಾರ್ ತಿಳಿಸಿದ್ದಾರೆ.