ಬಳ್ಳಾರಿ: ಬಿಸಿ ನೀರಿನಿಂದ ಸಾಯೋ ಕೊರೊನಾ ರೋಗಕ್ಕೆ ಕೋಟ್ಯಂತರ ರೂ.ಗಳನ್ನು ವ್ಯಯಿಸಿ ಇಷ್ಟೊಂದು ಪ್ರಚಾರ ನೀಡಲಾಗುತ್ತೆ. ನಾನು ಬೇಕಾದರೆ ಚಾಲೆಂಜ್ ಮಾಡುತ್ತೇನೆ. ಕೋವಿಡ್ ಸೋಂಕಿತರೊಂದಿಗೆ ಕಾಲ ಕಳೆದು ಬರುತ್ತೇನೆ. ನನಗೆ ಕೋವಿಡ್ ಸೋಂಕು ಬರುತ್ತಾ ನೋಡುತ್ತೇನೆ ಎಂದು ಕಮ್ಮರಚೇಡು ಮಠದ ಕಲ್ಯಾಣ ಸ್ವಾಮೀಜಿ ಸವಾಲೆಸೆದಿದ್ದಾರೆ.
ಬಳ್ಳಾರಿ ನಗರದ ಸ್ನೇಹ ಸಂಪುಟದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿನ ಭಯದಿಂದ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಜಿಲ್ಲಾಡಳಿತವಾಗಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವಾಗಲಿ ಕೊರೊನಾ ಸೋಂಕಿನ ಭಯವನ್ನು ಹೋಗಲಾಡಿಸಲು ಯಾವ ಪ್ರಯತ್ನವನ್ನು ನಡೆಸುತ್ತಿಲ್ಲ ಎಂದು ದೂರಿದರು.
ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಪರೀಕ್ಷೆಗೆ ಒಳಪಡಿಸಿ. ಅವರು ಸತ್ತಿರುವುದು ಈ ಕೋವಿಡ್ ಸೋಂಕಿನಿಂದ ಅಲ್ಲ. ಬದಲಾಗಿ ಭಯದಿಂದ ಅಥವಾ ಗಂಭೀರ ಸ್ವರೂಪದ ಕಾಯಿಲೆಯಿಂದ ಮಾತ್ರ ಸಾವನ್ನಪ್ಪಿರುವುದು. ನಾನು ಕೂಡ ಕೋವಿಡ್ ಸೋಂಕಿತರೊಂದಿಗೆ ಬೆರೆತು ಬರುವೆ. ನನಗೆ ಟೆಸ್ಟ್ ಮಾಡಿ ನೋಡಿ. ಇದೆಲ್ಲ ಶುದ್ಧ ಸುಳ್ಳು. ಬಿಸಿ ನೀರಿನಿಂದ ಸಾಯೋ ರೋಗಕ್ಕೆ ಸಾವಿರಾರು ಕೋಟಿ ರೂ.ಗಳ ಹಣ ವ್ಯಯಿಸಿ ಜಾಹೀರಾತು ಪ್ರಸಾರ ಮಾಡಿ ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ ಎಂದರು.

ಈ ದೇಶದಲ್ಲಿ ದಿನದಿಂದ ದಿನಕ್ಕೆ ಈ ಕೋವಿಡ್ ಸೋಂಕಿನ ಭಯ ಹೆಚ್ಚುತ್ತಿದೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಸೇರಿದಂತೆ ಯಾರೊಬ್ಬರೂ ಕೂಡ ಈ ಸೋಂಕಿನಿಂದ ಸಾಯಲ್ಲ ಎಂದು ಧೈರ್ಯವಾಗಿ ಹೇಳೋಕೆ ತಯಾರಿಲ್ಲ. ಮಾಸ್ಕ್ ಧರಿಸಿದರೆ ಕೋವಿಡ್ ಸೋಂಕು ಹರಡಲ್ಲ ಎಂಬುವುದು ಶುದ್ಧ ಸುಳ್ಳು. ಮಾಸ್ಕ್ ಹಾಕಿದರೆ ಉಸಿರುಗಟ್ಟಿ ಸಾಯುತ್ತಾರೆ ಎಂದು ತಿಳಿಸಿದ್ದಾರೆ.
ಗ್ರಾಮೀಣ ಭಾಗಕ್ಕೆ ಒಮ್ಮೆ ಹೋಗಿ ನೋಡಿ. ಅವರು ಯಾರೂ ಕೂಡ ಮಾಸ್ಕ್, ಸ್ಯಾನಿಟೈಸರ್ ಬಳಸಲ್ಲ. ಸಾಮೂಹಿಕವಾಗಿ ಊಟ ಮಾಡುತ್ತಾರೆ. ಅವರಿಗೆ ಏಕೆ ಕೋವಿಡ್ ಬರಲ್ಲ. ಯಥೇಚ್ಛವಾಗಿ ಈ ಕೋವಿಡ್ ಸೋಂಕು ಹರಡುವ ಸಂದರ್ಭದಲ್ಲಿ ನಾನು ಮಹಾರಾಷ್ಟ್ರದ ಹತ್ತು ಸಾವಿರ ಭಕ್ತರ ಮಧ್ಯೆ ಓಡಾಡಿಕೊಂಡು ಬಂದಿರುವೆ. ಕಲಬುರಗಿಯಲ್ಲೂ ಕೂಡ ಇಂಥದ್ದೇ ವಾತಾವರಣದಲ್ಲಿ ಓಡಾಡಿಕೊಂಡು ಬಂದಿರುವೆ. ಆದರೂ ಕೂಡ ಕೋವಿಡ್ ಸೋಂಕು ನನ್ನ ಹತ್ರ ಸುಳಿದಿಲ್ಲ ಎಂದರು.
Laxmi News 24×7