ಬೆಂಗಳೂರು: ರಾಜ್ಯದ ಲಕ್ಷಾಂತರ ಸಣ್ಣ ರೈತರ ಪಾಲಿಗೆ ಕಂಟಕಪ್ರಾಯವಾಗಿ ‘ಬಂಧನ ಭೀತಿ’ ತಂದೊಡ್ಡಿರುವ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಕೊಂಚ ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಜತೆಗೆ ಸರ್ಕಾರಿ ಭೂಮಿ ಒತ್ತುವರಿ ಮಾಡಿ ಕಾಫಿ, ಅಡಕೆ ಇತ್ಯಾದಿ ಬೆಳೆ ಬೆಳೆಯುತ್ತಿರುವ ರೈತರಿಗೆ ಅದೇ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಬಯಸಿದೆ.
ಕಂದಾಯ ಇಲಾಖೆಯಿಂದ ಮುಂದಿನ ಕೆಲವು ವಾರ, ತಿಂಗಳಲ್ಲಿ ಒಂದಷ್ಟು ಮಹತ್ವಪೂರ್ಣ ತೀರ್ವನಗಳನ್ನು ಎದುರು ನೋಡಬಹುದಾಗಿದೆ. ಸೋಮವಾರ ವಿಜಯವಾಣಿ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಈ ಸಂಗತಿಗಳನ್ನು ಪ್ರಸ್ತಾಪಿಸಿದರು. ಫೆಬ್ರವರಿ ಎರಡನೇ ವಾರದಲ್ಲಿ 56 ಲಕ್ಷ ರೈತರ ಮನೆ ಬಾಗಿಲಿಗೆ ನಾಲ್ಕು ಪ್ರಮುಖ ಭೂ ದಾಖಲೆಯನ್ನು ಉಚಿತವಾಗಿ ತಲುಪಿಸಲಾಗುತ್ತದೆ. ಕನಿಷ್ಠ ಅವಧಿಯಲ್ಲಿ ಅಫಿಡವಿಟ್ ಆಧಾರದಲ್ಲಿ ಭೂ ಪರಿವರ್ತನೆ ಪ್ರಕ್ರಿಯೆ ಮಾಡುವ ಆದೇಶ ಸದ್ಯವೇ ಹೊರಬೀಳುವ ವಿಚಾರವನ್ನು ಸಚಿವರು ವಿವರಿಸಿದರು.
ಕಂದಾಯ ಇಲಾಖೆಯ ಸಮಸ್ಯೆ, ಸವಾಲು, ಹೊಸತನಗಳ ವಿಚಾರ ಕುರಿತ ಪ್ರಶ್ನೆಗಳಿಗೆ ಸಾವಧಾನವಾಗಿ ಉತ್ತರಿಸಿದ ಸಚಿವರು, ತಮ್ಮ ಪ್ರಯತ್ನ, ದೂರದೃಷ್ಟಿ ಕ್ರಮಗಳು ಜನರ ಅನುಭವಕ್ಕೆ ಬರಲಿದೆ ಎಂಬುದನ್ನು ಒಂದೊಂದಾಗಿ ವಿವರಿಸಿದರು. ಭೂ ಕಬಳಿಕೆ ನಿಷೇಧ ಕಾಯ್ದೆಯಿಂದ ಸಣ್ಣ ರೈತರು ಜೈಲುಪಾಲಾಗುವುದನ್ನು ತಪ್ಪಿಸಲು ಕಾನೂನು ಸಡಿಲಿಕೆ ಮಾಡಲು ಈ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ತರುವುದಾಗಿ ಪ್ರಕಟಿಸಿದರು. ಈ ಸಮಸ್ಯೆ ಸರ್ಕಾರದ ಅರಿವಿನಲ್ಲಿದೆ. ವಿಜಯವಾಣಿಯ ವೇದಿಕೆಯು ಮತ್ತೆ ನೆನಪಿಸಿದೆ. ಈ ಅಧಿವೇಶ ನದಲ್ಲೇ ತಿದ್ದುಪಡಿ ಮಸೂದೆ ಮಂಡಿಸಿ ಶಾಸನಸಭೆಯ ಒಪ್ಪಿಗೆ ಪಡೆಯಲಾಗುವುದೆಂದು ಅಶೋಕ್ ತಿಳಿಸಿದರು.