ನಗರದಲ್ಲಿ ಅಸಮರ್ಪಕ ಹಾಗೂ ಸಮಯಕ್ಕೆ ಸರಿಯಾಗಿ ನೀರುಸರಬರಾಜಾಗುತ್ತಿಲ್ಲ. ಇನ್ನು ಈ ಭಾಗದ ವಾಟರ್ಮ್ಯಾನ್ ಸ್ಥಳೀಯರ ಜತೆ ಸರಿಯಾಗಿ ವರ್ತಿಸುತ್ತಿಲ್ಲ ಎಂದು ಆರೋಪಿಸಿ ಸೋಮವಾರ ಶಿವಾಜಿನಗರದ ನಿವಾಸಿಗಳು ಖಾಲಿ ಕೊಡದೊಂದಿಗೆ ಪ್ರತಿಭಟನೆಗೆ ಮುಂದಾದ ಘಟನೆ ನಾಲ್ಕನೇ ಕ್ರಾಸ್ನಲ್ಲಿ ನಡೆದಿದೆ.
ನಾಲ್ಕು-ಐದು ದಿನಗಳಿಗೆ ಒಮ್ಮೆ ನಗರದಲ್ಲಿ ನೀರು ಸರಬರಾಜು ಆಗುತ್ತಿದೆ. ಮೂರು ತಾಸು ನೀರು ಬಿಡಬೇಕು ಎಂಬ ಸೂಚನೆ ಇದ್ದರೂ ಸಹ ಬರೀ ಎರಡು ತಾಸಿಗೆ ನೀರಿನ ವಾಲ್ವವನ್ನು ವಾಟರ್ಮ್ಯಾನ್ ಬಂದ್ ಮಾಡುತ್ತಾರೆ ಮಾತ್ರವಲ್ಲ; ನಿಗದಿತ ವೇಳೆಯಲ್ಲಿ ನೀರು ಬಿಡದೆ ತನಗೆ ತೋಚಿದಂತೆ ನೀರು ಬಿಡುತ್ತಿರುವ ಕಾರಣ ನೀರು ತುಂಬಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತಿದೆ ಎಂದು ಶಿವಾಜಿನಗರದ ರಹವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಭಾಗದಲ್ಲಿ ಆಗಾಗ ವಾಟರ್ಮನ್ಗಳನ್ನು ಬದಲಾಯಿಸುವುದರಿಂದ ಆತನಿಗೆ ಸ್ಥಳೀಯರ ಪರಿಚಯವೂ ಇಲ್ಲದಂತಾಗಿದೆ. ನೀರು ಬಿಡುವ ಸಮಯ ಬದಲಾವಣೆ ಬಗ್ಗೆಯೂ ಯಾರಿಗೂ ಮಾಹಿತಿ ಇಲ್ಲದೆ ಇರುವುದರಿಂದ ಕೆಲಸಕ್ಕೆ ಹೋಗುವವರು, ಮನೆಯಲ್ಲಿರುವ ಹಿರಿಯ ನಾಗರಿಕರು ತೀವ್ರ ಸಂಕಷ್ಟ ಪಡುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ವೇಳೆ ಮಾತನಾಡಿದ ಸುರೇಖಾ ಕಟಾವಕರ ಮತ್ತೊಂದು ಬೀದಿಯಲ್ಲಿ ಮೂರು ತಾಸಿಗೂ ಹೆಚ್ಚು ಹೊತ್ತು ನೀರು ಬಿಡುತ್ತಾರೆ.
ಜನ ನೀರು ತುಂಬಿಸಿ ಮುಗಿಸಿದ ನಂತರವೂ ಟಾಪ್ ಇಲ್ಲದ ನಲ್ಲಿಯಿಂದ ನೀರು ಹರಿದು ಪೋಲಾಗುತ್ತದೆ. ಇಷ್ಟಾದರು ಈ ಬಗ್ಗೆ ಸಂಬಂಧಪಟ್ಟವರು ಯಾರೂ ಗಮನ ಹರಿಸುವುದಿಲ್ಲ. ಇನ್ನು ನಮ್ಮ ಗಲ್ಲಿಯಲ್ಲಿ ನೀರಿಗಾಗಿ ಜನ ಹಪಹಪಿಸುವಂತಾಗಿದೆ. ನಾಲ್ಕು ದಿನಕ್ಕೊಮ್ಮೆ ನೀರು ಬಿಟ್ಟರೂ ತುಂಬಾ ನಿಧಾನವಾಗಿ ಬರುವುದರಿಂದ ತುಂಬಿಸಿಕೊಳ್ಳುವಷ್ಟರಲ್ಲಿಯೇ ವಾಲ್ವ ಬಂದ್ ಮಾಡುತ್ತಾರೆ ಎಂದು ದೂರಿದ್ದಾರೆ.