ಬೆಂಗಳೂರು: ನಗರದಲ್ಲಿ ಶಂಕರ್ ಎಂಬವರ ಕುಟುಂಬದ ಐವರ ಸಾವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರ ತನಿಖೆ ಚುರುಕುಗೊಂಡಿದೆ. ಈ ವೇಳೆ, ಪ್ರತ್ಯೇಕವಾಗಿ ಬರೆದಿದ್ದ 27 ಪುಟಗಳ ಡೆತ್ನೋಟ್ ಪತ್ತೆಯಾಗಿದೆ. ಈ ಮೊದಲು ಮನೆಯಲ್ಲಿ 3 ಪ್ರತ್ಯೇಕ ಡೆತ್ನೋಟ್ ಪತ್ತೆಯಾಗಿತ್ತು. ಸಿಂಚನಾ ಎಂಬವರ ಕೊಠಡಿಯಲ್ಲಿ 4 ಪುಟಗಳ ಡೆತ್ನೋಟ್ ಸಿಕ್ಕಿತ್ತು. ಸಿಂಧೂರಾಣಿ ಕೊಠಡಿಯಲ್ಲಿ 4 ಪುಟದ ಡೆತ್ನೋಟ್ ಸಿಕ್ಕಿತ್ತು. ಇಬ್ಬರೂ ತಮ್ಮ ಗಂಡನ ಮನೆ ಮತ್ತು ತಂದೆ ವಿರುದ್ಧ ಆರೋಪ ಮಾಡಿದ್ದರು.
ಬಳಿಕ ಮಗ ಮಧುಸಾಗರ್ ಎಂಬವರು ಬರೆದಿದ್ದ 19 ಪುಟಗಳ ಡೆತ್ನೋಟ್ ಪತ್ತೆ ಆಗಿತ್ತು. ಅದರಲ್ಲಿ ತಂದೆ ಮೇಲೆ ಸಾಲು ಸಾಲು ಆರೋಪ ಮಾಡಲಾಗಿತ್ತು. ಸಿಂಚನಾ, ಸಿಂಧೂರಾಣಿ ಕನ್ನಡದಲ್ಲಿ ಡೆತ್ನೋಟ್ ಬರೆದಿದ್ದರು. ಮಧುಸಾಗರ್ ಇಂಗ್ಲಿಷ್ನಲ್ಲಿ 19 ಪುಟದ ನೋಟ್ ಬರೆದಿದ್ದರು.
ವಿನಾಯಕನಗರದಲ್ಲಿ ಒಂದೇ ಕುಟುಂಬದ ಐವರು ಸಾವು ಪ್ರಕರಣ ಜನರ ಮನಸನ್ನು ತಲ್ಲಣಗೊಳಿಸಿತ್ತು. ಈ ಸಂಬಂಧ ಇದೀಗ ಮನೆಯಲ್ಲಿ ಒಟ್ಟಾರೆ 3 ಡೆತ್ ನೋಟ್ ಸಿಕ್ಕಿದೆ. ಸಿಂಚನಾ (32), ಸಿಂಧೂರಾಣಿ (29), ಮಧುಸಾಗರ್ (25) ಬರೆದ ಡೆತ್ ನೋಟ್ ಸಹಿತ ಮೂವರಿಂದ 27 ಪುಟಗಳ ಡೆತ್ ನೋಟ್ ಲಭಿಸಿದೆ.
ಶಂಕರ್ ಪುತ್ರ ಹಾಗೂ ಇಬ್ಬರು ಪುತ್ರಿಯರಿಂದ ಡೆತ್ ನೋಟ್ಸ್ ಲಭಿಸಿದೆ. ಹಲ್ಲೇಗೆರೆ ಶಂಕರ್ ಕುಟುಂಬದ ಐವರ ಸಾವಿನ ಪ್ರಕರಣವನ್ನು ಇದೀಗ ಡೆತ್ ನೋಟ್ಸ್ ಆಧಾರದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ತಂದೆಯ ವಿರುದ್ಧ ಮಕ್ಕಳಿಂದ ಸಾಲು ಸಾಲು ಆರೋಪ ತಿಳಿದುಬಂದಿದೆ.
ತಂದೆ ಬಗ್ಗೆ ಮಗನ ಆರೋಪ ಏನೇನಿತ್ತು?
ತಂದೆ ವಿರುದ್ಧ ಗಂಭೀರ ಆರೋಪ ಮಾಡಿದ್ದ ಮಧುಸಾಗರ್, ದೂರಿನ ಪ್ರತಿಗಳನ್ನು ಜೆರಾಕ್ಸ್ ಮಾಡಿ ಹಂಚಿದ್ದರಂತೆ. ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಂದೆಯ ಬಗ್ಗೆ ಮಗ ಆರೋಪಗಳ ಸುರಿ ಮಳೆ ಮಾಡಿದ್ದರು. ಮಹಿಳಾಪೀಡಕ, ಸೈಕೋಪಾಥ್ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದರಂತೆ. ಶಂಕರ್ ಸಮಾಜದಲ್ಲಿ ‘ಪ್ರತಿಷ್ಠೆ’ಗಾಗಿ ಏನು ಬೇಕಾದರೂ ಮಾಡಬಲ್ಲರು. ನನ್ನ ತಾಯಿಗೆ ಹಲವು ವರ್ಷಗಳಿಂದ ಕಿರುಕುಳ ಕೊಟ್ಟಿದ್ದಾರೆ. ಶಂಕರ್ನದ್ದು ದುರ್ವರ್ತನೆಯಿಂದ ಕೂಡಿದ ಜೀವನವಾಗಿತ್ತು. ಶಂಕರ್ ಹೊರ ಜಗತ್ತಿಗೆ ‘ಮುಖವಾಡ’ ಹಾಕಿ ಬದುಕುತ್ತಿದ್ದ. ಅಪ್ಪ ಶಂಕರ್ ತುಂಬಾ ಸ್ವಾರ್ಥಿ ಎಂದು ಮಧುಸಾಗರ್ ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ತಿಳಿದುಬಂದಿದೆ.