ಬೆಂಗಳೂರು, ಮಾ.14- ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣದ ಸಾಚಾತನ ಪತ್ತೆಹಚ್ಚುವ ಸವಾಲು ಎಸ್ಐಟಿಗೆ ಎದುರಾಗಿದೆ. ನನ್ನ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿ ನಕಲಿ ಸಿಡಿ ಬಿತ್ತರಗೊಳ್ಳುವಂತೆ ನೋಡಿಕೊಂಡು ನನ್ನ ರಾಜಕೀಯ ಜೀವನ ಹಾಳು ಮಾಡಿದ್ದಾರೆ ಎನ್ನುವುದು ರಮೇಶ್ ಜಾರಕಿಹೊಳಿ ಅವರ ಆರೋಪವಾಗಿದೆ.
ಇದರ ಬೆನ್ನಲ್ಲೇ ಸಂತ್ರಸ್ತ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ತುಣುಕಿನಲ್ಲಿ ಆ ರೀತಿಯ ಸಿಡಿ ಯಾರು ಮಾಡಿದ್ದಾರೋ ಗೊತ್ತಿಲ್ಲ. ಅದರಿಂದ ನನ್ನ ಮಾನ ಹರಾಜಾಗಿದೆ. ಎಲ್ಲದಕ್ಕೂ ಜಾರಕಿಹೊಳಿ ಅವರೇ ಕಾರಣ. ನನಗೆ ಜೀವಭಯವಿದೆ ಎಂದು ಹೇಳಿಕೆ ನೀಡಿದ್ದಾರೆ\ಜಾರಕಿಹೊಳಿ ಮತ್ತು ಸಂತ್ರಸ್ತ ಯುವತಿಯ ಹೇಳಿಕೆಗಳು ಪರಸ್ಪರ ತದ್ವಿರುದ್ಧವಾಗಿರುವುದರಿಂದ ಅಶ್ಲೀಲ ಸಿಡಿ ಬಿಡುಗಡೆ ಮಾಡಿದವರು ಯಾರು, ಇದರ ಹಿಂದೆ ಯಾರಿದ್ದಾರೆ, ಸಿಡಿಯ ಸಾಚಾತನ ಏನು ಎಂಬುದನ್ನು ಪತ್ತೆಹಚ್ಚುವುದು ಎಸ್ಐಟಿ ಪೊಲೀಸರಿಗೆ ಸವಾಲಾಗಿದೆ.
ಮಹಿಳೆಯನ್ನು ಬಳಕೆ ಮಾಡಿಕೊಂಡು ಹನಿಟ್ರ್ಯಾಪ್ ಮಾಡಲಾಗಿದೆಯೇ ಅಥವಾ ಮಹಿಳೆ ಆರೋಪಿಸುವಂತೆ ಜಾರಕಿಹೊಳಿ ಕಡೆಯವರೇ ಸಿಡಿ ಸೃಷ್ಟಿಸಿದರೇ, ಇಲ್ಲವೆ ರಾಜಕೀಯ ದುರುದ್ದೇಶದಿಂದ ಎದುರಾಳಿಗಳು ಇಬ್ಬರಿಗೂ ತಿಳಿಯದಂತೆ ಸಿಡಿ ಮಾಡಿ ರಮೇಶ್ ಜಾರಕಿಹೊಳಿ ಅವರ ಮಾನ ಹರಾಜು ಹಾಕಿದರೆ ಎಂಬ ಪ್ರಶ್ನೆ ಪೊಲೀಸರನ್ನು ಕಾಡುತ್ತಿದೆ.
ಸಿಡಿ ಬಯಲಾಗಿ 12 ದಿನ ಕಳೆದರೂ ಇದುವರೆಗೂ ಸುಮ್ಮನಿದ್ದ ಜಾರಕಿಹೊಳಿ ಅವರು ನಿನ್ನೆ ದಿಢೀರ್ ಪೊಲೀಸರಿಗೆ ದೂರು ನೀಡಿ ನನ್ನ ವಿರುದ್ಧ ಕೆಲವರು ಷಡ್ಯಂತ್ರ ರೂಪಿಸಿದ್ದರು ಎಂದು ಆರೋಪಿಸಿದ್ದರು.
ಜಾರಕಿಹೊಳಿ ದೂರು ನೀಡಿದ ಬೆನ್ನಲ್ಲೇ ಸಂತ್ರಸ್ತ ಯುವತಿ ಸಾಮಾಜಿಕ ಜಾಲತಾಣಗಳಲ್ಲಿ ಸಿಡಿ ಮಾಡಿರುವುದು ನನಗೆ ಗೊತ್ತಿಲ್ಲ. ನನ್ನ ಮಾನ ಹರಾಜಾಗಿದೆ. ಹೀಗಾಗಿ ನಾನು ಮತ್ತು ನನ್ನ ಕುಟುಂಬದವರು ಹಲವಾರು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದುಂಟು ಎಂದು ಹೇಳಿಕೆ ನೀಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಜಾರಕಿಹೊಳಿ ಮತ್ತು ಮಹಿಳೆ ಸಿಡಿ ಕುರಿತಂತೆ ತದ್ವಿರುದ್ಧ ಹೇಳಿಕೆ ನೀಡಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಸಿಡಿ ಸಾಚಾತನ ಪತ್ತೆಹಚ್ಚಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಈಗಾಗಲೇ ಸಿಡಿ ಪ್ರಕರಣದ ಆಳ-ಅಗಲಗಳನ್ನು ಅಳೆದು-ತೂಗಿ ನೋಡಿರುವ ಎಸ್ಐಟಿ ಪೆÇಲೀಸರು ಸಿಡಿ ಸಾಚಾತನವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗುವರೇ ಎಂಬುದು ಭಾರೀ ಕುತೂಹಲ ಕೆರಳಿಸಿದೆ.